ಕೋಲಾರ, ೧೨ ಮಾರ್ಚ್ (ಹಿ.ಸ.) :
ಆ್ಯಂಕರ್ : ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ದೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯಾಧೀಶರಾದ ಜಿ.ಎ ಮಂಜುನಾಥ್ ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಏರ್ಪಡಿಸಲಾಗಿದ್ದ, ಪೋಕ್ಸೋ ಕಾಯ್ದೆ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರತಿಯೊಬ್ಬರೂ ಈ ನೆಲದ ಕಾನೂನನ್ನು ಗೌರವಿಸಬೇಕು. ನಾವು ಕಾನೂನು ರಕ್ಷಣೆ ಮಾಡಿದರೆ, ಕಾನೂನು ನಮ್ಮನ್ನು ರಕ್ಷಣೆ ಮಾಡುತ್ತದೆ. ಕಾನೂನು ಅರಿವು ಇಲ್ಲದಿದ್ದರೆ ಅಪರಾಧ ಪ್ರಕರಣಗಳು ಹೆಚ್ಚುತ್ತವೆ ಎಂದರು.
೧೮ವರ್ಷ ವಯೋಮಿತಿಯೊಳಗಿನ ಯಾವುದೇ ಮಕ್ಕಳನ್ನು ಅಪ್ರಾಪ್ತ ವಯಸ್ಸಿನವರೆಂದು ಪರಿಗಣಿಸಲಾಗುತ್ತದೆ. ಅಂತವರು ಪೋಕ್ಸೋ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಅಕ್ಷಮ್ಯ ಅಪರಾಧ ಪೋಕ್ಸೋ ಕಾಯ್ದೆಯಡಿ ಯಾವುದೇ ವ್ಯಕ್ತಿ ಅಪ್ತಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಭೀತಾದರೆ. ಅಂತಹ ಅಪರಾಧಿಗೆ ೨೦ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದರು.
ವೈದ್ಯರು ಸಮಾಜದ ಸುಧಾರಕರು ಶಿಕ್ಷಕರ ನಂತರ ಅಷ್ಠೇ ಗೌರವವನ್ನು ವೈದ್ಯರಿಗೆ ನೀಡಲಾಗುತ್ತದೆ. ಪೋಕ್ಸೋ ಪ್ರಕರಣಗಳನ್ನು ವರದಿ ಮಾಡುವಾಗ ಬಹಳ ಜಾಗರೂಕತೆಯಿಂದ ವರದಿ ಮಾಡಬೇಕು. ವೈದ್ಯರ ವರದಿಯನ್ನು ಆಧರಿಸಿ ಸಾಕ್ಷಿಗಳ ಹೇಳಿಕೆ ಮೇರೆಗೆ ಪ್ರಕರಣದ ತೀರ್ಪು ನೀಡಲಾಗುತ್ತದೆ. ಅದ್ದರಿಂದ ವೈದ್ಯರು ತಮ್ಮ ಅನುಭವದ ಧಾರೆಯೆರೆದು ವರದಿಗಳನ್ನು ಪ್ರಾಮಾಣಿಕವಾಗಿ ಸಿದ್ಧಪಡಿಸಬೇಕು ಎಂದರು.
ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ಎಂ ಶಾಂತಕುಮಾರ್ ಅವರು ಮಾತನಾಡಿ ವೈದ್ಯಕೀಯ ಗರ್ಭಸಮಾಪನ ಕಾಯ್ದೆಯ ಕುರಿತು ವೈದ್ಯರಿಗೆ ಮುಖ್ಯವಾಗಿ ತಿಳಿದಿರಬೇಕು. ಮಸೂದೆಯಲ್ಲಿ ಕೆಲವರ್ಗದ ಮಹಿಳೆಯರಿಗೆ ೨೦ ಮತ್ತು ೨೪ ವಾರಗಳ ನಡುವೆ ತಮ್ಮ ಗರ್ಭದಾರಣೆಯನ್ನು ಅಂತ್ಯಗೊಳಿಸಲು ಅನುಮತಿಸುತ್ತದೆ. ಇಂತಹ ಪ್ರಕರಣಗಳನ್ನು ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಆಗ ಮಾತ್ರ ನ್ಯಾಯಬದ್ಧವಾದ ಗರ್ಭಸಮಾಪನ ಪ್ರಕರಣ ಪೂರ್ಣಗೊಳ್ಳುತ್ತದೆ ಎಂದರು.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ.ನಿಖಿಲ್ ಅವರು ಮಾತನಾಡಿ ನುರಿತ ವೈದ್ಯರು ಪೋಕ್ಸೋ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಾಗ ಸಾಧ್ಯವಾದಷ್ಟು ವೀಡಿಯೋ ಸಾಕ್ಷ?ಯಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಸಮರ್ಪಕವಾಗಿ ಸಿದ್ಧಪಡಿಸಬೇಕು. ಇದರಿಂದಾಗಿ ಸಂತ್ರಸ್ಥೆಯ ಪರವಾಗಿ ವಾಧಿಸಲು ಅನುಕೂಲವಾಗುತ್ತದೆ. ವೈದ್ಯರ ಸಾಕ್ಷಿಗಳು ವೈಜ್ಞಾನಿಕವಾಗಿರುತ್ತದೆ. ಆದ್ದರಿಂದ ಸದರಿ ವರದಿಗಳನ್ನು ನೈಜವಾಗಿ ಹಾಗೂ ಸ್ಪಷ್ಠವಾಗಿ ಬರೆಯಬೇಕು. ಅಂತಯೇ ದೈರ್ಯವಾಗಿ ಹಾಗೂ ನಿಷ್ಪಕ್ಷಪಾತವಾಗಿ ವರದಿಗಳನ್ನು ಸಲ್ಲಿಸಬೇಕು. ನಿಗಧಿತ ಅವಧಿಯೊಳಗೆ ವರದಿಗಳನ್ನು ಸಲ್ಲಿಸಿದರೆ ಮಾತ್ರ ಸಂತ್ರಸ್ಥೆಯರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್. ಹೊಸಮನಿ ಅವರು ಮಾತನಾಡಿ ಕಾರ್ಯನಿಮಿತ್ತ ಜೈಲುಗಳನ್ನು ಭೇಟಿ ನೀಡುವ ಸಂದರ್ಭದಲ್ಲಿ ೧೮ ರಿಂದ ೨೦ ವರ್ಷದ ವಯೋಮಿತಿಯೊಳಗಿನ ಹುಡುಗರು ಪೋಕ್ಸೋ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಈ ಕಾಯ್ದೆಯು ಸಂತ್ರಸ್ಥೆಯು ಅಧಿಕಾರಿ ಬಳಿಗೆ ಬರುವ ಬದಲು, ಅಧಿಕಾರಿಗಳೇ ಸಂತ್ರಸ್ಥೆಯ ಬಳಿ ತೆರಳಿ ವಿವರಗಳನ್ನು ಮತ್ತು ಹೇಳಿಕೆಗಳನ್ನು ದಾಖಲಿಸಲು ಒತ್ತು ನೀಡುತ್ತದೆ. ಇಂತಹ ಹೇಳಿಕೆಗಳು ಹಾಗೂ ವೈದ್ಯರ ಅಭಿಪ್ರಾಯ ಮತ್ತು ವರದಿಗಳನ್ನು ಆಧರಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುವುದು. ತನಿಖಾಧಿಕಾರಿಗಳು ವೈದ್ಯರ ವರದಿ ಹಾಗೂ ಸಂತ್ರಸ್ಥೆಯ ಹೇಳಿಕೆ ಮತ್ತು ಉಳಿದ ಸಾಕ್ಷಿಗಳ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಬೇಕಾಗುತ್ತದೆ ಎಂದರು.
ಜಿಲ್ಲಾಧಿಕಾರಿಗಳಾದ ಡಾ|| ಎಂ.ಆರ್ ರವಿ ಅವರು ಮಾತನಾಡಿ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ಮಾಡುವ ಪೋಕ್ಸೋ ಕಾನೂನು ೨೦೧೨ರಲ್ಲಿ ಜಾರಿಗೆ ಬಂದಿತು. ನಿರ್ಭಯ ಪ್ರಕರಣದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗಿದ್ದು, ಈ ಕಾಯ್ದೆಯಲ್ಲಿ ಕೇವಲ ೪೬ ಕಲಂಗಳಿವೆ. ಆದರೆ ಅತ್ಯಂತ ಶಕ್ತಿಯುತ ಕಾಯ್ದೆಯಾಗಿದೆ. ಈ ಕಾಯ್ದೆಯನ್ನು ಜಾರಿಗೆ ತರುವ ಹಿನ್ನೆಲೆಯ ಆಶಯವನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಹೀನಕೃತ್ಯವು ಕಡಿಮೆಯಾದಿತು ಎಂದರು.
೧೦೯೮ ಸಹಾಯವಾಣಿಯನ್ನು ಸರ್ಕಾರವು ಜಾರಿಗೊಳಿಸಿದ್ದು, ಒಂದೇ ಸಹಾಯವಾಣಿಯಡಿಯಲ್ಲಿ ಪೊಲೀಸ್, ಆರೊಗ್ಯ ಹಾಗೂ ಅಗ್ನಿ ತುರ್ತಗಳಿಗೆ ಬಳಸಬಹುದಾಗಿದೆ. ಈ ಸಹಾಯವಾಣಿಯನ್ನು ಪ್ರತಿಯೊಂದು ಶಾಲೆಗಳಲ್ಲಿ ಮುಖ್ಯವಾಗಿ ಕಾಲೇಜುಗಳಲ್ಲಿ ಸಾರ್ವಜನಿಕರಲ್ಲಿ ಪ್ರಚಾರ ಪಡಿಸಬೇಕು. ಎಲ್ಲಾ ಇಲಾಖೆಗಳ ಮುಖ್ಯಸ್ಥರು ಮತ್ತು ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಪೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ಗೆ ವರದಿ ಮಾಡಬೇಕು. ಇಲ್ಲವಾದಲ್ಲಿ ಅಪರಾಧ ಮಾಡಿದಂತಾಗುವುದು. ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳಾಗಿ ಹೃದಯ ಹೀನರಾಗಿ ವರ್ತಿಸುವುದು ನಾಚಿಕೆಗೇಡಿನ ಸಂಗತಿ ಎಂದರು.
ಕೆಲಸದ ಸ್ಥಳದಲ್ಲಿ ಸ್ತ್ರೀಯರನ್ನು ಗೌರವಿಸುವುದು ಪ್ರತಿಯೊಬ್ಬ ಉದ್ಯೋಗಿಯ ಕರ್ತವ್ಯವಾಗಿದೆ ಅಲ್ಲದೇ ಅವರ ರಕ್ಷಣೆಯನ್ನು ಸಹಾ ಮಾಡಬೇಕು. ಅಧಿಕಾರಿಗಳು ಮತ್ತು ಉದ್ಯೋಗದಾತರು ಸಂವೇದನ ಶೀಲರಾಗಿ ಕಾರ್ಯನಿರ್ವಹಿಸಬೇಕು. ವೈದ್ಯಾಧಿಕಾರಿಗಳು ಪೋಕ್ಸೋ ಪ್ರಕರಣಗಳನ್ನು ಮಾನವೀಯ ದೃಷ್ಠಿಯಿಂದ ಎದುರಿಸಬೇಕು. ಝರ್ಜರಿತ ಮನಸ್ಸಿಗೆ ಸಾಂತ್ವನ ಹೇಳುವ ಅಧಿಕಾರಿಗಳಾಗಬೇಕು. ಮಸೂದೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಬಲ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇಂತಹ ಬೆಂಬಲ ವ್ಯಕ್ತಿಗಳನ್ನು ಒದಗಿಸುತ್ತದೆ. ಪ್ರಕರಣಕ್ಕೆ ಒಳಗಾದ ಮಗುವಿಗೆ ಕಾನೂನು ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ತಕ್ಷಣವೇ ಒದಗಿಸಿಕೊಡಬೇಕು. ಈ ಕುರಿತಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಬಾಲ್ಯ ವಿವಾಹವು ಅಪ್ರಾಪ್ತ ವಯಸ್ಸಿನ ವಧುವಿನ ಒಪ್ಪಿಗೆಯಿಂದಾಗಿದ್ದರು ಸಹ ಕಾನೂನು ಬಾಹಿರವಾದ್ದರಿಂದ, ಅಂತಹ ಪ್ರಕರಣಗಳು ನಡೆಯುವ ಮೊದಲೇ ತಡೆಯಲು ಪ್ರಯತ್ನಿಸಬೇಕು ಎಂದರು.
ಇದಕ್ಕೂ ಮೊದಲು ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ ಶ್ರೀನಿವಾಸ್ ಅವರು, ಸಮಾಜದಲ್ಲಿನ ಪಿಡಗುಗಳ ವಿರುದ್ಧ ಹೋರಾಟಗಳು ನಿರಂತವಾಗಿ ನಡೆಯುತ್ತಿರುತ್ತವೆ. ಆದರೆ ಸಮಾಜಿಕ ದೌರ್ಜನ್ಯಗಳ ಕುರಿತು ಗಮನಹರಿಸದೆ ಇರುವುದು ದುರ್ದೈವ. ಅದರಲ್ಲಿಯು ಪ್ರಮುಖವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ. ಈ ವಿಚಾರಕ್ಕಾಗಿ ಕಾನೂನಿನ ಅಗತ್ಯವಿಲ್ಲದೆ ಸ್ವಯಂ ಪ್ರೇರಿತವಾಗಿ ನಿಯಂತ್ರಣಕ್ಕೆ ಬರಬೇಕಿತ್ತು. ಆದರೆ ದುರ್ದೈವದಿಂದ ಕಠಿಣ ಕಾನೂನನ್ನು ನಮ್ಮ ಮೇಲೆ ಹೇರಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಪ್ರವೀಣ್ ಪಿ. ಬಾಗೇವಾಡಿ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಜಗದೀಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಚಂದನ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ನಾರಾಯಣಸ್ವಾಮಿ, ಎಲ್ಲಾ ತಾಲ್ಲೂಕಿನ ವೈದ್ಯಾಧಿಕಾರಿಗಳು, ಜಿಲ್ಲಾ ವೈದ್ಯಕೀಯ ಶಿಕ್ಷಣಾಧಿಕಾರಿ ಪ್ರೇಮಾ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ನಗರದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಏರ್ಪಡಿಸಲಾಗಿದ್ದ, ಪೋಕ್ಸೋ ಕಾಯ್ದೆ ಕುರಿತು ಅರಿವು ಕಾರ್ಯಾಗಾರವನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಧೀಶ ಮಂಜುನಾಥ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ