
ಕೋಲಾರ, ಡಿಸೆಂಬರ್ ೦೪ (ಹಿ.ಸ) :
ಆ್ಯಂಕರ್ : ಪಠ್ಯದಷ್ಟೇ ಕ್ರೀಡೆಗಳಿಗೂ ಪ್ರಾಮುಖ್ಯತೆ ಇದ್ದು, ಸಮಗ್ರ ಶಿಕ್ಷಣದ ಭಾಗವಾಗಿದೆ, ಆಟೋಟಗಳ ಮೂಲಕ ವಿಶ್ವಮಾನ್ಯತೆ ಪಡೆದ ಅನೇಕ ಕ್ರೀಡಾಪಟುಗಳು ನಮಗೆ ಆದರ್ಶವಾಗಿದ್ದು, ನೀವು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆಯೊಂದಿಗೆ ಜಿಲ್ಲೆ ಹಾಗೂ ನಿಮ್ಮ ಶಾಲೆಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಣಾಧಿಕಾರಿ ವೀಣಾ ಕರೆ ನೀಡಿದರು.
ನಗರದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಜಿಲ್ಲಾಮಟ್ಟದಲ್ಲಿ ಗೆಲುವು ಸಾಧಿಸಿದ ೧೭ ವಯೋಮಿತಿಯ ೭೦ ಮಂದಿ ಬಾಲಕ,ಬಾಲಕಿಯರು ಇದೀಗ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಮೇಲಾಟಗಳಲ್ಲಿ ಪಾಲ್ಗೊಳ್ಳಲು ಹೊರಟ ಸಂದರ್ಭದಲ್ಲಿ ಅವರಿಗೆ ಸಮವಸ್ತç ವಿತರಿಸಿ ಶುಭ ಕೋರಿ ಬೀಳ್ಕೊಟ್ಟು ಮಾತನಾಡಿದರು.
ಪೋಷಕರು ಇಂಜಿನಿಯರಿAಗ್, ಮೆಡಿಕಲ್ ಶಿಕ್ಷಣಕ್ಕೆ ಮಕ್ಕಳನ್ನು ಸೀಮಿತವಾಗಿಸಲು ಓದಿನ ಕಡೆಗೆ ಆದ್ಯತೆ ನೀಡುತ್ತಾರೆ, ಆದರೆ ಅನೇಕ ಮಕ್ಕಳಲ್ಲಿ ಓದಿಗಿಂತ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರತಿಭೆ ಮತ್ತು ಆಸಕ್ತಿ ಇರುತ್ತದೆ ಅಂತಹ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಸಿಗದೇ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಓದಿನಿಂದ ಮಾತ್ರವೇ ಸಾಧನೆ ಮಾಡಬಹುದು ಎಂಬುದು ಸೂಕ್ತ ನಿರ್ಧಾರವಲ್ಲ, ಅದರ ಜತೆಗೆ ಶಿಕ್ಷಣದ ಒಂದು ಭಾಗವಾಗಿರುವ ಕ್ರೀಡೆಗಳಲ್ಲೂ ಜಗತ್ತು ಬೆರಗಾಗಿ ನೋಡುವಂತೆ ಸಾಧನೆ ಮಾಡಬಹುದು, ವಿಶ್ವಮಾನ್ಯತೆ ಗಳಿಸಬಹುದು ಎಂಬುದಕ್ಕೆ ಅನೇಕ ಕ್ರಿಕೆಟಿಗರು ಮಾತ್ರವಲ್ಲ ಒಲಂಪಿಕ್ಸ್ನಲ್ಲಿ ಪದಕ ಗೆದ್ದು ದೇಶದ ಘನತೆ ಹೆಚ್ಚಿಸಿದ ಸಾಧಕರು ಸಾಕ್ಷಿಯಾಗಿದ್ದಾರೆ ಎಂದರು.
ಕ್ರೀಡೆಗಳಿAದ ಕಲಿಕೆಗೆ ಆಸಕ್ತಿ ಹೆಚ್ಚುತ್ತದೆ, ಮಕ್ಕಳು ಉಲ್ಲಾಸದಿಂದ ಓದಿನ ಕಡೆ ಗಮನಹರಿಸಲು ಸಾಧ್ಯವಾಗುತ್ತದೆ ಎಂಬ ಸತ್ಯವನ್ನು ಅರಿತೇ ಶಿಕ್ಷಣ ತಜ್ಞರು ಪಠ್ಯದೊಂದಿಗೆ ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಿದ್ದಾರೆ ಎಂದು ತಿಳಿಸಿ, ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಹೋಗುತ್ತಿರುವ ಮಕ್ಕಳು ಅಲ್ಲಿ ಉತ್ತಮ ಸಾಧನೆ ಮಾಡಿ, ಜಿಲ್ಲೆಗೆ ಕೀರ್ತಿ ತನ್ನಿ ಎಂದು ಕರೆ ನೀಡಿ, ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾ ವಹಿಸಲು ತಂಡದ ವ್ಯವಸ್ಥಾಪಕರಾಗಿ ಹೋಗುತ್ತಿರುವ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಚಂದ್ರಶೇಖರ್ ಮಾತನಾಡಿ, ಜಿಲ್ಲಾಮಟ್ಟದಲ್ಲಿ ನಡೆದ ಪ್ರೌಢಶಾಲಾ ಹಂತದ ಕ್ರೀಡಾಕೂಟದಲ್ಲಿ ಮೇಲಾಟಗಳಲ್ಲಿ ಗೆಲುವು ಸಾಧಿಸಿದ ಒಟ್ಟು ೭೦ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ತೆರಳುತ್ತಿದ್ದು, ಅವರ ಸುರಕ್ಷತೆಗೆ ಒತ್ತು ನೀಡಲಾಗಿದೆ, ಟ್ರಾö್ಯಕ್ ಸೂಟ್ ಕೊಡಿಸಲಾಗಿದೆ ಎಂದು ತಿಳಿಸಿದರು.
ವಿಷಯ ಪರಿವೀಕ್ಷಕ ಸಮೀವುಲ್ಲಾ ಮಾತನಾಡಿ, ರಾಜ್ಯಮಟ್ಟದ ಮೇಲಾಟಗಳು ಬೆಂಗಳೂರು ನಗರದ ಕಂಠೀರವರ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಮುಂದಿನ ವರ್ಷಗಳಲ್ಲಿ ಕೋಲಾರದಲ್ಲೂ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ಪ್ರಯತ್ನ ನಡೆಸಿ ಎಂದು ಸಲಹೆ ನೀಡಿ, ರಾಜ್ಯಮಟ್ಟಕ್ಕೆ ಹೊರಟ ಮಕ್ಕಳಿಗೆ ಶುಭ ಕೋರಿದರು.
ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ ಮಾತನಾಡಿ, ರಾಜ್ಯಮಟ್ಟಕ್ಕೆ ಹೋಗುತ್ತಿರುವ ಮಕ್ಕಳಿಗೆ ಅಲ್ಲಿ ಊಟ, ವಸತಿ ಸೌಲಭ್ಯ ಒದಗಿಸಲಾಗಿದೆ, ಯಾವುದೇ ಸಮಸ್ಯೆ ಎದುರಾಗದಂತೆ ಮಕ್ಕಳ ಸುರಕ್ಷತೆಗೂ ಒತ್ತು ನೀಡಲಾಗಿದೆ ಎಂದು ತಿಳಿಸಿ, ಮಕ್ಕಳಿಗೆ ಶುಭ ಕೋರಿದರು.
ಮಕ್ಕಳೊಂದಿಗೆ ತಂಡದ ವ್ಯವಸ್ಥಾಪಕರಾಗಿ ಶಿಕ್ಷಕರಾದ ಅಂಬಿಕಾ, ವೆಂಕಟೇಶ್, ನಾರಾಯಣಸ್ವಾಮಿ ತೆರಳಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಮುರಳಿಮೋಹನ್, ವಿವಿಧ ತಾಲ್ಲೂಕುಗಳ ದೈಹಿಕ ಶಿಕ್ಷಣಾಧಿಕಾರಿಗಳಾದ ರಹೀಂ ಪಾಷಾ, ಮಂಜುನಾರ್ಥ, ವೆಂಕಟೇಶ್, ವೆಂಕಟಸ್ವಾಮಿ,ಶಿಕ್ಷಕರಾದ ಕೆ.ಲೀಲಾ ಮತ್ತಿತರರಿದ್ದರು.
ಚಿತ್ರ : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಮೇಲಾಟಗಳಲ್ಲಿ ಪಾಲ್ಗೊಳ್ಳಲು ಹೊರಟ ಸಂದರ್ಭದಲ್ಲಿ ಅವರನ್ನು ಕೋಲಾರ ಶಿಕ್ಷಣಾಧಿಕಾರಿ ವೀಣಾ ಕರೆ ಸಮವಸ್ತç ವಿತರಿಸಿ ಬೀಳ್ಕೊಟ್ಟರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್