

ಹೊಸಪೇಟೆ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೇಶವನ್ನು ಸಂಪೂರ್ಣ ಪೋಲಿಯೋ ಮುಕ್ತವನ್ನಾಗಿಸಲು ಸಾರ್ವಜನಿಕರು ಐದು ವರ್ಷದೊಳಗಿನ ಮಕ್ಕಳಿಗೆ ಹತ್ತಿರದ ಪೋಲಿಯೋ ಲಸಿಕೆ ಬೂತ್ಗಳಿಗೆ ತೆರಳಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ ಅವರು ಹೇಳಿದ್ದಾರೆ.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್, ಭಾರತೀಯ ವೈದ್ಯಕೀಯ ಸಂಘ, ವಿಶೇಷ ಚೇತನರ ಸಂಘಟನೆಗಳ ವೇದಿಕೆ, ಮಲ್ಲಿಗೆ ಪ್ಯಾರಾ ಮೆಡಿಕಲ್ ಕಾಲೇಜ್, ತುಂಗಭದ್ರ ಸ್ಕೂಲ್ ಆಫ್ ನಸಿರ್ಂಗ್ ಮತ್ತು ಟಿಎಂಇ ಸೋಸೈಟಿ ಆಫ್ ನಸಿರ್ಂಗ್ ಕಾಲೇಜ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಶನಿವಾರ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗದರ್ಶನದಲ್ಲಿ ಸಂಪೂರ್ಣ ಭಾರತ ಪೋಲಿಯೋ ಮುಕ್ತವಾಗುವಲ್ಲಿ ಯಶಸ್ವಿಯಾಗಿದೆ. ಆದರೆ ನೆರೆಯ ದೇಶ ಪಾಕಿಸ್ತಾನದಲ್ಲಿ 30 ಹಾಗೂ ಅಪಘಾನಿಸ್ತಾನದಲ್ಲಿ 9 ಪ್ರಕರಣ ಕಂಡು ಬಂದಿರುವ ಹಿನ್ನೆಲೆ ಯಾವುದೇ ರೀತಿಯ ನಿರ್ಲಕ್ಷ್ಯತನ ವಹಿಸದೇ ಪೋಲಿಯೋ ಲಸಿಕೆ ಹಾಕಿಸುವಲ್ಲಿ ವಿವಿಧ ಇಲಾಖೆಗಳ ಸಮನ್ವಯತೆಯೊಂದಿಗೆ ಈ ಬಾರಿ ಹಮ್ಮಿಕೊಂಡಿರುವ ಡಿಸೆಂಬರ್.21 ರಿಂದ 24ರ ವರಗೆ ರಾಷ್ಟ್ರೀಯ ಪಲ್ಸ್ ಪೆÇೀಲಿಯೋ ಕಾರ್ಯಕ್ರಮದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಕಡ್ಡಾಯವಾಗಿ ಲಸಿಕೆ ಹಾಕಿಸಲು ಉತ್ತೇಜನ ನೀಡಬೇಕಿದೆ.
ಈ ಹಿಂದೆ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದ್ದರೂ ಸಹ ಈ ಬಾರಿಯೂ ತಪ್ಪದೇ ಇನ್ನೊಂದು ಬಾರಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಜಿಲ್ಲೆಯಲ್ಲಿ ಐದು ವರ್ಷದೊಳಗಿನ 1,31,363 ಮಕ್ಕಳಿಗೆ
ಪೋಲಿಯೋ ಲಸಿಕೆ ಹಾಕಲು 1087 ತಂಡಗಳು, 2174 ಲಸಿಕೆದಾರರು, 1036 ಬೂತ್ಗಳು, 175 ಮೇಲ್ವಿಚಾರಕು, 45 ಟ್ರಾನ್ಸಿಟ್, 628 ಹೆಚ್ಆರ್ಎ ಸೈಟ್ಗಳು, 6 ಮೊಬೈಲ್ ತಂಡಗÀಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಿಂದ ಆರಂಭಗೊಂಡ ಪೋಲಿಯೋ ಜಾಗೃತಿ ಜಾಥಾ ಪ್ರಮುಖ ವೃತ್ತಗಳಾದ ಗಾಂಧಿ ಚೌಕ್, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ, ಡಾ.ಪುನೀತ್ ರಾಜಕುಮಾರ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ರಾಮಾ ಟಾಕೀಸ್ ಮುಂಭಾಗದಿಂದ ದೊಡ್ಡ ಮಸೀದಿ ಮಾರ್ಗವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದವರೆಗೆ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಆಶಾ ಕಾರ್ಯಕರ್ತೆಯರು ಪೋಲಿಯೋ ಸಂಬಂಧಿತ ಘೋಷಣೆ ಹಾಕುತ್ತ ಜನ ಜಾಗೃತಿ ಮೂಡಿಸಿದರು.
ಈ ವೇಳೆ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ರಾಧಿಕಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ, ತಾಲೂಕು ವೈದ್ಯಾಧಿಕಾರಿ ಡಾ.ವಿನೋದ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿಂಧು ಅಂಗಡಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ರಘುನಾಥ ದೀಪಾಲಿ, ಮಕ್ಕಳ ತಜ್ಞೆ ಲಲಿತಾ ಜೈನ್ ಸೇರಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್