ನವದೆಹಲಿ, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಛತ್ತೀಸ್ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಕ್ಸಲ ವಿರೋಧಿ ಕಾರ್ಯಾಚರಣೆಗಳಲ್ಲಿ ಮಹತ್ವದ ಯಶಸ್ಸು ದಾಖಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಅವರ ಪ್ರಕಾರ, ಜನವರಿ 2024 ರಿಂದ ಇದುವರೆಗೆ ಒಟ್ಟು 2,100 ನಕ್ಸಲರು ಶರಣಾಗಿದ್ದಾರೆ, 1,785 ಜನರನ್ನು ಬಂಧಿಸಲಾಗಿದೆ ಹಾಗೂ 477 ಜನರನ್ನು ತಟಸ್ಥಗೊಳಿಸಲಾಗಿದೆ.
ಅಮಿತ್ ಶಾ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, “ಇದು ಮಾರ್ಚ್ 31, 2026ರೊಳಗೆ ನಕ್ಸಲಿಸಂ ನಿರ್ಮೂಲನೆ ಮಾಡುವ ನಮ್ಮ ದೃಢ ಸಂಕಲ್ಪದ ಪ್ರತಿಫಲವಾಗಿದೆ ಎಂದಿದ್ದಾರೆ.
ಗುರುವಾರ 170 ನಕ್ಸಲರು ಶರಣಾಗಿದ್ದರೆ, ಒಂದು ದಿನ ಮುಂಚೆ 27 ಮಂದಿ ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ಮಹಾರಾಷ್ಟ್ರದಲ್ಲಿಯೂ 61 ನಕ್ಸಲರು ಹಿಂಸಾಚಾರದ ಮಾರ್ಗ ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದಾರೆ. ಅಂದರೆ, ಕಳೆದ ಎರಡು ದಿನಗಳಲ್ಲಿ ಒಟ್ಟು 258 ಎಡಪಂಥೀಯ ಉಗ್ರಗಾಮಿಗಳು ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ.
“ಹಿಂಸೆಯನ್ನು ತ್ಯಜಿಸಿ ಸಂವಿಧಾನದ ಮೇಲಿನ ನಂಬಿಕೆಯನ್ನು ಪುನರುಚ್ಚರಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಡೆಯುತ್ತಿರುವ ನಿರಂತರ ಪ್ರಯತ್ನಗಳಿಂದ ನಕ್ಸಲಿಸಂ ಈಗ ಕೊನೆಯ ಹಂತಕ್ಕೆ ಬಂದಿದೆ. ನಮ್ಮ ನಿಲುವು ಸ್ಪಷ್ಟ — ಶರಣಾಗುವವರಿಗೆ ಸ್ವಾಗತ, ಆದರೆ ಶಸ್ತ್ರ ಕೈಬಿಡದವರಿಗೆ ಕಠಿಣ ಕ್ರಮ ಎಂದು ಎಚ್ಚರಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಈಗ 18 ರಿಂದ 11ಕ್ಕೆ ಇಳಿದಿದೆ. ಅತ್ಯಧಿಕ ಪೀಡಿತ ಜಿಲ್ಲೆಗಳ ಸಂಖ್ಯೆ 6 ರಿಂದ 3ಕ್ಕೆ ಇಳಿದಿದ್ದು, ಇವುಗಳಲ್ಲಿ ಛತ್ತೀಸ್ಗಢದ ಬಿಜಾಪುರ, ಸುಕ್ಮಾ ಮತ್ತು ನಾರಾಯಣಪುರ ಪ್ರಮುಖವಾಗಿ ಉಳಿದಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa