ಕುರುಗೋಡು, 18 ಏಪ್ರಿಲ್ (ಹಿ.ಸ):
ಆ್ಯಂಕರ್ : ಲೋಕಸಭಾ ಸಾರ್ವತ್ರಿಕ ಚುನಾವಣಾ ಅಂಗವಾಗಿ ಸಾರ್ವಜನಿಕರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎನ್ನುವ ನಿಟ್ಟಿನಲ್ಲಿ ಗುರುವಾರ ಕುರುಗೋಡಿನ ಸರ್ಕಾರಿ ಬಾಲಕರ ಪ್ರೌಢಶಾಲೆಯ ಮೈದಾನದಲ್ಲಿ ಓಟರ್ಸ್ ಕ್ರಿಕೆಟ್ ಕಪ್ ಪಂದ್ಯಾವಳಿ ಆಯೋಜಿಸುವ ಮೂಲಕ ಜನಸಾಮನ್ಯರಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಕುರುಗೋಡು ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಓಟರ್ಸ್ ಕ್ರಿಕೇಟ್ ಕಪ್ ಕಾರ್ಯಕ್ರಮವನ್ನು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ ನಿರ್ಮಲಾ ಅವರು ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾವಂತರು, ನೌಕರರು, ಯುವಕರು ತಪ್ಪದೇ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಸದೃಢಗೊಳಿಸಬೇಕು. ತಮ್ಮವರಿಗೂ ಮತದಾನ ಮಹತ್ವ ಕುರಿತು ಅರಿವು ಮೂಡಿಸಿ ಎಂದು ಕರೆ ನೀಡಿದರು.
ಓಟರ್ಸ್ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ತಾಲ್ಲೂಕು ಪಂಚಾಯತ್ ತಂಡ, ತಾಲ್ಲೂಕು ಕಚೇರಿ ತಂಡ, ಪತ್ರಕರ್ತರ ತಂಡ, ಮತ್ತು ಪುರಸಭೆ ತಂಡಗಳು ಭಾಗವಹಿಸಿದ್ದರು.
ಪ್ರಥಮ ಸ್ಥಾನ ಪತ್ರಕರ್ತರ ತಂಡ ಹಾಗೂ ಎರಡನೇ ಸ್ಥಾನ ತಾಲ್ಲೂಕು ಪಂಚಾಯತ್ ತಂಡದವರು ಪಡೆದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್ ರೇಣುಕಾದೇವಿ, ಪುರಸಭೆ ಮುಖ್ಯಾಧಿಕಾರಿ ತಿಮ್ಮಪ್ಪ, ಪಂಚಾಯತ್ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಅನಿಲ್ ಕುಮಾರ್, ತಾಲ್ಲೂಕು ಆಡಳಿತ ಕಚೇರಿಯ ಸಿಬ್ಬಂದಿ ವರ್ಗದವರು, ತಾಲ್ಲೂಕು ಪಂಚಾಯತ್ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.