
ಕಠ್ಮಂಡು, 01 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ನೇಪಾಳದ ನುವಾಕೋಟ್ ಜಿಲ್ಲೆಯ ವಿದುರ ಪುರಸಭೆ ವ್ಯಾಪ್ತಿಯ ಬೇತ್ರಾವತಿ ಗ್ರಾಮದಲ್ಲಿ ಭೋಟೆಕೋಶಿ ನದಿಯ ಪ್ರವಾಹದ ಅವಶೇಷಗಳಡಿ ಸಿಲುಕಿದ್ದ ಮನೆಯಿಂದ 23 ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ. ಮಂಗಳವಾರ ನಡೆದ ಶೋಧ ಕಾರ್ಯಾಚರಣೆ ವೇಳೆ ಮನೆಯ ಒಂದು ಕೊಠಡಿಯಿಂದ 21 ಹಾಗೂ ಹೊರಭಾಗದಿಂದ ಎರಡು ಶವಗಳು ಪತ್ತೆಯಾಗಿವೆ.
ಕಳೆದ ಬುಧವಾರ ಭೋಟೆಕೋಶಿ ನದಿ ಮೂಲಕ ತ್ರಿಶೂಲಿ ನದಿಗೆ ಉಂಟಾದ ಭೀಕರ ಪ್ರವಾಹದಲ್ಲಿ ಮೂರು ಅಂತಸ್ತಿನ ಈ ಮನೆ ಕೊಚ್ಚಿಹೋಗಿತ್ತು. ಪ್ರವಾಹದಿಂದ ತಪ್ಪಿಸಿಕೊಳ್ಳಲು ಕೆಲವರು ಮೇಲಂತಸ್ತಿಗೆ ತೆರಳಿದ್ದರೂ, ಅಲ್ಲಿಯೇ ಪ್ರವಾಹಕ್ಕೆ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆಯಾದ ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಇವರು ಗೋಸಾಯಿಕುಂಡಕ್ಕೆ ತೆರಳುತ್ತಿದ್ದ ಯಾತ್ರಿಕರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲವು ಶವಗಳೊಂದಿಗೆ ಬ್ಯಾಗ್ಗಳು ಪತ್ತೆಯಾಗಿದ್ದು, ಓರ್ವ ಮೃತರು ವಿದೇಶಿ ಪ್ರಜೆಯಂತೆ ಕಾಣುತ್ತಿದ್ದಾರೆ ಎಂದು ನುವಾಕೋಟ್ ಪೊಲೀಸ್ ವರಿಷ್ಠಾಧಿಕಾರಿ ಬಿಪಿನ್ ರೆಗ್ಮಿ ತಿಳಿಸಿದ್ದಾರೆ.
ಮನೆಯ ಮೇಲ್ಛಾವಣಿಯ ಕೆಳಗಿನ ಕೊಠಡಿಯಲ್ಲಿ ಶವಗಳು ಪತ್ತೆಯಾಗಿವೆ. ಮಹಿಳೆಯೊಬ್ಬರ ಶವವು ಪುಟ್ಟ ಬಾಲಕಿಯನ್ನು ತಬ್ಬಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರು ತಾಯಿ-ಮಗಳಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆಯಾದ 23 ಶವಗಳ ಪೈಕಿ ಎಂಟು ಶವಗಳನ್ನು ತ್ರಿಶೂಲಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದ ಶವಗಳನ್ನು ಮನೆಯ ಮೇಲ್ಛಾವಣಿಯಲ್ಲಿ ಇರಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.