

ಬಳ್ಳಾರಿ, 25 ಆಗಸ್ಟ್ (ಹಿ.ಸ.)
ಆ್ಯಂಕರ್: ಬಳ್ಳಾರಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿರುವ ಅಮರಾವತಿ ಎಕ್ಸ್ಪ್ರೆಸ್ ರೈಲನ್ನು ಕಾಕಿನಾಡ ವರೆಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೋರಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಆಂದ್ರಪ್ರದೇಶದ ಸಚಿವರಾದ ನಾರಾ ಲೋಕೇಶ್ ಅವರಲ್ಲಿ ಮನವಿ ಮಾಡಿದೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ. ಸತ್ಯಬಾಬು ಅವರು ಸಚಿವರಿಗೆ ಕುಡತಿನಿಯಲ್ಲಿ ಮಂಗಳವಾರ ಮನವಿ ಸಲ್ಲಿಸಿ, ಅಮರಾವತಿ ಎಕ್ಸ್ಪ್ರೆಸ್ ರೈಲು ಸಂಖ್ಯೆ 17226 ಮತ್ತು 17225 ಪ್ರಸ್ತುತ ನರಸಾಪುರಕ್ಕೆ ನಿಲ್ಲುತ್ತವೆ. ಈ ಮಾರ್ಗವನ್ನು ಕಾಕಿನಾಡಕ್ಕೆ ವಿಸ್ತರಿಸುವುದರಿಂದ ಆಗುವ ಅನುಕೂಲಗಳ ಕುರಿತು ಸಚಿವ ನಾರಾ ಲೋಕೇಶ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಬಳ್ಳಾರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರು ಆಂಧ್ರ ಪ್ರದೇಶದ ವಿವಿಧ ನಗರಗಳಿಗೆ, ವಿಶೇಷವಾಗಿ ಕಾಕಿನಾಡು ಪ್ರದೇಶಕ್ಕೆ ಸಂಚರಿಸಲು ಅನುಕೂಲವಾಗಲಿದೆ. ಈ ಭಾಗದ ಪ್ರವಾಸೋದ್ಯಮ, ವ್ಯಾಪಾರ, ಕೈಗಾರಿಕೆ, ಶಿಕ್ಷಣ, ಉದ್ಯೋಗ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೂ ಪ್ರೋತ್ಸಾಹ ಸಿಗಲಿದೆ. ಪ್ರಯಾಣಿಕರು ಮತ್ತು ವ್ಯಾಪಾರ ವಲಯದ ಹಿತದೃಷ್ಟಿಯಿಂದ ಈ ಮನವಿಯನ್ನು ಪರಿಗಣಿಸಿ, ರೈಲ್ವೆ ಸಚಿವಾಲಯದ ಮೇಲೆ ಒತ್ತಡ ಹೇರುವ ಮೂಲಕ ರೈಲ್ವೆ ಮಾರ್ಗವನ್ನು ವಿಸ್ತರಣೆ ಮಾಡಸಬೇಕು ಎಂದು ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್