
ಬೆಂಗಳೂರು, 24 ಆಗಸ್ಟ್ (ಹಿ.ಸ.):
ಆ್ಯಂಕರ್:
2026-27ನೇ ಸಾಲಿನ ಕರ್ನಾಟಕ ಧನ ವಿನಿಯೋಗ ವಿಧೇಯಕದಡಿ 7,042.69 ಕೋಟಿ ರೂ. ಮೊತ್ತದ ಮೊದಲ ಕಂತಿನ ಪೂರಕ ಅಂದಾಜು ಪ್ರಸ್ತಾವನೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ಅನುಮೋದನೆ ದೊರೆಯಿತು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಭಯ ಸದನಗಳಲ್ಲಿ ಪ್ರಸ್ತಾವನೆ ಮಂಡಿಸಿ ವಿವರ ನೀಡಿದರು. ಒಟ್ಟು ಮೊತ್ತದಲ್ಲಿ 4,324.35 ಕೋಟಿ ರೂ. ರಾಜಸ್ವ ವೆಚ್ಚ ಹಾಗೂ 2,718.35 ಕೋಟಿ ರೂ. ಬಂಡವಾಳ ವೆಚ್ಚ ಸೇರಿದೆ.
ಬರದಿಂದ ಸಂಕಷ್ಟದಲ್ಲಿರುವ ಜನರಿಗೆ ಕುಡಿಯುವ ನೀರು ಒದಗಿಸುವ ‘ಜಲಧಾರೆ’ ಯೋಜನೆಯಡಿ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂ.ನಂತೆ ಒಟ್ಟು 289 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಬೆಂಗಳೂರಿನ ರಸ್ತೆ ಅಭಿವೃದ್ಧಿಗಾಗಿ ಮೂಲಸೌಕರ್ಯ ಬಂಡವಾಳದಡಿ 1,000 ಕೋಟಿ ರೂ. ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಪೂರಕ ಅಂದಾಜಿನಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಯೋಜನೆಗೆ 2,918 ಕೋಟಿ ರೂ., ಭಾರತ್ ಜೋಡೋ ಯುವ ಸಂಘಗಳಿಗೆ 781 ಕೋಟಿ ರೂ., ಅಮೃತ ಯೋಜನೆಗೆ 708 ಕೋಟಿ ರೂ. ಮೀಸಲಿಡಲಾಗಿದೆ.
ಇದರ ಜೊತೆಗೆ ರಸ್ತೆ ಸಾರಿಗೆ ನಿಗಮದ ಸರ್ಕಾರಿ ಮೋಟಾರು ವಾಹನ ತೆರಿಗೆ ಷೇರು ಬಂಡವಾಳ ಬದಲಾವಣೆಗೆ 193.61 ಕೋಟಿ ರೂ., ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಅಭಿಯಾನಕ್ಕೆ 152.72 ಕೋಟಿ ರೂ., ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆಗೆ 93 ಕೋಟಿ ರೂ., ವಿಶ್ವೇಶ್ವರಯ್ಯ ಜಲನಿಗಮಕ್ಕೆ 91 ಕೋಟಿ ರೂ. ಹಾಗೂ ಕೆಕೆಆರ್ಟಿಸಿಗೆ ಬಸ್ಗಳ ಖರೀದಿಗಾಗಿ 96 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಉಳಿದಂತೆ ವಿವಿಧ ಯೋಜನೆಗಳಿಗೆ 738 ಕೋಟಿ ರೂ. ಅನುದಾನವನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿದ್ದು, ಒಟ್ಟು 7,042.69 ಕೋಟಿ ರೂ. ಮೊತ್ತದ ಪೂರಕ ಅಂದಾಜಿಗೆ ಉಭಯ ಸದನಗಳ ಅನುಮೋದನೆ ದೊರೆತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.