
ಬೆಂಗಳೂರು, 22 ಆಗಸ್ಟ್ (ಹಿ.ಸ.):
ಆ್ಯಂಕರ್:
ಜಿಕೆವಿಕೆ ಆವರಣದ ಗಣಪತಿ ದೇವಸ್ಥಾನ ಸಮೀಪದ ಗುಂಡುತೋಪಿನಲ್ಲಿ ಆಯೋಜಿಸಿದ್ದ ‘ರೈತಸಂತೆ’ ನಗರ ಜನರ ಗಮನ ಸೆಳೆಯಿತು. ಸಾಂಪ್ರದಾಯಿಕ ಆಹಾರ ಪದಾರ್ಥಗಳು, ನವೀನ ಕೃಷಿ ಉತ್ಪನ್ನಗಳು ಹಾಗೂ ಆರೋಗ್ಯಕರ ತಿಂಡಿ-ತಿನಿಸುಗಳನ್ನು ಸಾರ್ವಜನಿಕರು ಸವಿದು ಸಂಭ್ರಮಿಸಿದರು.
ಉದ್ದು ಮತ್ತು ಹುರಳಿಯಿಂದ ತಯಾರಿಸಿದ ವಿಶೇಷ ಹಪ್ಪಳ, ಗಿರ್ ತಳಿಯ ಗಿಣ್ಣು, ತಾಜಾ ಅವಕಾಡೊ ಟೋಸ್ಟ್, ಹಾಲು ಮತ್ತು ಕಲ್ಲಂಗಡಿಯಿಂದ ತಯಾರಿಸಿದ ‘ಮೊಹಬ್ಬತ್ ಶರ್ಬತ್’ ಹಾಗೂ ಸಿರಿಧಾನ್ಯಗಳ ಅಂಬಲಿ ವಿಶೇಷ ಆಕರ್ಷಣೆಯಾಗಿದ್ದವು.
ಕೈತೋಟಗಳಿಗೆ ಉಪಯುಕ್ತವಾದ ಮಣ್ಣಿನ ಫಲವತ್ತತೆ ಕಾಪಾಡುವ ಸೂಕ್ಷ್ಮಜೀವಿಗಳನ್ನೊಳಗೊಂಡ ಜೈವಿಕ ಗೊಬ್ಬರದ ಕ್ಯಾಪ್ಸೂಲ್ಗಳು ಗಮನ ಸೆಳೆದವು. ಸಾವಯವ ತರಕಾರಿ, ಹಣ್ಣುಗಳು, ಸ್ವರ್ಣಧಾರ ಕೋಳಿ, ನಾಟಿ ಮೊಟ್ಟೆ, ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು ಹಾಗೂ ಪಶುಸಂಗೋಪನೆ ಉತ್ಪನ್ನಗಳ ಮಾರಾಟವೂ ನಡೆಯಿತು. ಎತ್ತಿನ ಬಂಡಿ ಸವಾರಿಯು ಗ್ರಾಮೀಣ ಬದುಕಿನ ಅನುಭವವನ್ನು ನೀಡಿತು.
ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ. ಸುರೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಮಳಿಗೆಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು. ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಜನರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕುಲಪತಿ ಸುರೇಶ ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R