
ಧಾರವಾಡ, 22 ಆಗಸ್ಟ್ (ಹಿ.ಸ.):
ಆ್ಯಂಕರ್:ನಗರದ ವಿದ್ಯಾಗಿರಿಯಲ್ಲಿ ನವೀಕೃತಗೊಂಡ ಅತ್ಯಾಧುನಿಕ ಎನ್-ಜೆನ್ ಅಂಚೆ ಕಚೇರಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದರು.
ಅಂಚೆ ಇಲಾಖೆಯು ಸಾರ್ವಜನಿಕರಿಗೆ ಆಧುನಿಕ ಸೌಲಭ್ಯಗಳು, ಸುಧಾರಿತ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಅಂಚೆ ಕಚೇರಿಯನ್ನು ಅಭಿವೃದ್ಧಿಪಡಿಸಿದೆ. ದೇಶಾದ್ಯಂತ ಈಗಾಗಲೇ 100ಕ್ಕೂ ಅಧಿಕ ಎನ್-ಜೆನ್ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ದೆಹಲಿ ಐಐಟಿ ಆವರಣದಲ್ಲಿ 2025ರ ನವೆಂಬರ್ನಲ್ಲಿ ಮೊದಲ ಎನ್-ಜೆನ್ ಅಂಚೆ ಕಚೇರಿ ಆರಂಭವಾಗಿತ್ತು. ಇದೀಗ ವಿದ್ಯಾಗಿರಿಯ ಕಚೇರಿಯೂ ರಾಷ್ಟ್ರವ್ಯಾಪಿ ವಿಸ್ತರಣೆಯ ಭಾಗವಾಗಿದೆ.
ವಿಶ್ವವಿದ್ಯಾಲಯಗಳು ಮತ್ತು ಕಾಲೇಜು ಆವರಣಗಳಲ್ಲಿ ಯುವಜನತೆಗೆ ಅನುಕೂಲವಾಗುವಂತೆ ರೂಪಿಸಲಾಗಿರುವ ಎನ್-ಜೆನ್ ಅಂಚೆ ಕಚೇರಿಗಳು ಆಧುನಿಕ ಹಾಗೂ ಡಿಜಿಟಲ್ ಸ್ನೇಹಿ ಸೇವೆಗಳನ್ನು ಒದಗಿಸಲಿವೆ. ಗ್ರಾಹಕ ಸ್ನೇಹಿ ಸೌಲಭ್ಯಗಳ ಮೂಲಕ ಅಂಚೆ ಸೇವೆಗಳನ್ನು ವೇಗವಾಗಿ ಮತ್ತು ಸುಲಭವಾಗಿ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ನಿರ್ಮಾಣದ ಸಂಕಲ್ಪಕ್ಕೆ ಅನುಗುಣವಾಗಿ ತಂತ್ರಜ್ಞಾನ ಹಾಗೂ ಆಧುನಿಕ ಸೌಲಭ್ಯಗಳ ಮೂಲಕ ಅಂಚೆ ಸೇವೆಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಧಾರವಾಡ ಎನ್ಕೆ ವಿಭಾಗದ ಅಂಚೆ ಸೇವೆಗಳ ನಿರ್ದೇಶಕ ಶ್ರೀಹರ್ಷ ಎನ್., ಜೆಎಸ್ಎಸ್ ವಿದ್ಯಾಗಿರಿಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್, ಬೆಳಗಾವಿಯ ಹಿರಿಯ ಅಂಚೆ ಅಧೀಕ್ಷಕಿ ಆರುಷಿ ಶರ್ಮಾ, ಧಾರವಾಡದ ಉಪ ಅಂಚೆ ಅಧೀಕ್ಷಕ ಪ್ರವೀಣ್ ಎಫ್.ಎ. ಸೇರಿದಂತೆ ಅಂಚೆ ಇಲಾಖೆ ಅಧಿಕಾರಿಗಳು, ಗಣ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.