
ನವದೆಹಲಿ, 13 ಆಗಸ್ಟ್ (ಹಿ.ಸ.):
ಆ್ಯಂಕರ್:
ತಿರಂಗಾ ಯಾತ್ರೆ ಮತ್ತು ತಿರಂಗಾ ಅಭಿಯಾನ ದೇಶಾದ್ಯಂತ ಜನರ ಸಹಭಾಗಿತ್ವದ ಅಭಿಯಾನವಾಗಿ ರೂಪುಗೊಂಡಿದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
ಆಗಸ್ಟ್ 9ರಿಂದ ಆರಂಭವಾಗಿರುವ ತಿರಂಗಾ ಯಾತ್ರೆ ಮತ್ತು ತಿರಂಗಾ ಅಭಿಯಾನ ಆಗಸ್ಟ್ 15ರವರೆಗೆ ನಡೆಯಲಿದೆ. ದೇಶದ ನಗರಗಳಿಂದ ಗ್ರಾಮಗಳವರೆಗೆ ತಿರಂಗಾ ಯಾತ್ರೆಗಳನ್ನು ಆಯೋಜಿಸಲಾಗುತ್ತಿದ್ದು, ಜನರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ದೇಶ ಸ್ವಾತಂತ್ರ್ಯದ 75ನೇ ವರ್ಷವನ್ನು ಪೂರೈಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2022ರಲ್ಲಿ ತಿರಂಗಾ ಅಭಿಯಾನ ಕೇವಲ ಸರ್ಕಾರದ ಕಾರ್ಯಕ್ರಮವಾಗದೆ ಜನಾಂದೋಲನವಾಗಬೇಕು ಎಂದು ಕರೆ ನೀಡಿದ್ದರು. ಬಳಿಕ ದೇಶಾದ್ಯಂತ ಕೋಟ್ಯಂತರ ಮನೆಗಳಲ್ಲಿ ತಿರಂಗಾ ಹಾರಿಸಲಾಗಿದ್ದು, ಜನರು ಉತ್ಸಾಹದಿಂದ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಎಂದು ನಡ್ಡಾ ಹೇಳಿದರು.
ತಾವೂ ಇಂದು ತಮ್ಮ ನಿವಾಸದಲ್ಲಿ ಕುಟುಂಬದೊಂದಿಗೆ ತಿರಂಗಾ ಹಾರಿಸಿರುವುದಾಗಿ ತಿಳಿಸಿದ ನಡ್ಡಾ, ಇದು ತಮಗೆ ಹೆಮ್ಮೆಯ ಹಾಗೂ ಸೌಭಾಗ್ಯದ ಕ್ಷಣವಾಗಿದೆ ಎಂದರು. ತಿರಂಗಾ ದೇಶದ ಏಕತೆ, ಗೌರವ ಮತ್ತು ರಾಷ್ಟ್ರೀಯ ಭಾವನೆಯ ಪ್ರತೀಕವಾಗಿದೆ ಎಂದು ಹೇಳಿದರು.
ಭಾರತವನ್ನು ಆತ್ಮನಿರ್ಭರ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸಲು ದೇಶವಾಸಿಗಳಲ್ಲಿ ದೇಶಭಕ್ತಿಯ ಭಾವನೆ ಅಗತ್ಯ. ಜನರು ತಿರಂಗಾ ಅಭಿಯಾನದಲ್ಲಿ ಭಾಗವಹಿಸಿ, ದೇಶದ ಅಭಿವೃದ್ಧಿಯ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಜೆ.ಪಿ. ನಡ್ಡಾ ಕರೆ ನೀಡಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.