
ನವದೆಹಲಿ, 13 ಆಗಸ್ಟ್ (ಹಿ.ಸ.):
ಆ್ಯಂಕರ್:ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಹಠಮಾರಿ ಬಾಲಕನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕರು ನಿರ್ದಿಷ್ಟ ಗೌರವ ಮತ್ತು ಸಂಸದೀಯ ಮರ್ಯಾದೆಗೆ ಅನುಗುಣವಾಗಿ ತಮ್ಮ ಅಭಿಪ್ರಾಯ ಮಂಡಿಸಬೇಕು ಎಂದರು.
ರಾಹುಲ್ ಗಾಂಧಿ ಬಳಸುವ ‘ಸವಾಲು ಹಾಕುತ್ತೇನೆ’ ಎಂಬ ರೀತಿಯ ಭಾಷೆಗೆ ಆಕ್ಷೇಪ ವ್ಯಕ್ತಪಡಿಸಿದ ಗಿರಿರಾಜ್ ಸಿಂಗ್, ಸಂಸತ್ತಿನಲ್ಲಿ ಸವಾಲಿನ ಭಾಷೆಗಿಂತ ವಾಸ್ತವಾಂಶ ಮತ್ತು ತರ್ಕದ ಆಧಾರದಲ್ಲಿ ಚರ್ಚೆ ನಡೆಯಬೇಕು ಎಂದು ಹೇಳಿದರು.
ಅಮಿತ್ ಶಾ ಅವರನ್ನು ರಾಹುಲ್ ಗಾಂಧಿ ಅವರೊಂದಿಗೆ ಹೋಲಿಸುವುದು ಸರಿಯಲ್ಲ. 370ನೇ ವಿಧಿ ಮತ್ತು 35ಎ ರದ್ದು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಂತಹ ಪ್ರಮುಖ ವಿಷಯಗಳಲ್ಲಿ ಅಮಿತ್ ಶಾ ಕಾರ್ಯನಿರ್ವಹಿಸಿ ಫಲಿತಾಂಶ ತೋರಿಸಿದ್ದಾರೆ ಎಂದು ಹೇಳಿದರು.
ಭಯೋತ್ಪಾದನೆ ವಿಚಾರದಲ್ಲೂ ರಾಹುಲ್ ಗಾಂಧಿ ವಿರುದ್ಧ ಆರೋಪ ಮಾಡಿದ ಅವರು, ರಾಹುಲ್ ಗಾಂಧಿ ‘ನಗರ ನಕ್ಸಲ್’ ರೀತಿಯ ಪಾತ್ರ ವಹಿಸುತ್ತಿದ್ದಾರೆ ಎಂದು ಟೀಕಿಸಿದರು. ಧೈರ್ಯವಿದ್ದರೆ ಸಂಸದೀಯ ವಿಧಾನದಲ್ಲಿ ವಿಷಯಗಳ ಕುರಿತು ಚರ್ಚೆ ನಡೆಸಿ, ಇತರರ ಅಭಿಪ್ರಾಯವನ್ನೂ ಆಲಿಸಬೇಕು ಎಂದು ಹೇಳಿದರು.
ನೀಟ್ ಹಾಗೂ ಪೆಲೆಟ್ ಗನ್ ವಿಚಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, ಸದನದಲ್ಲಿ ಪೆಲೆಟ್ ಗನ್ ಕುರಿತು ಚರ್ಚೆ ನಡೆದರೆ ನೀಟ್ ವಿಷಯವೂ ಚರ್ಚೆಗೆ ಬರಲಿದೆ. ಬಳಿಕ ಪಂಜಾಬ್, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ವಿಷಯಗಳೂ ಚರ್ಚೆಯ ವ್ಯಾಪ್ತಿಗೆ ಬರಲಿವೆ ಎಂದರು.
ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಗಿರಿರಾಜ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರನ್ನು ಬೆಂಬಲಿಸುತ್ತಿರುವುದನ್ನು ಕಠಿಣ ಪದಗಳಲ್ಲಿ ಟೀಕಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.