
ಉಜ್ಜಯಿನಿ (ಮ.ಪ್ರ), 12ಆಗಸ್ಟ್ (ಹಿ.ಸ.):
ಆ್ಯಂಕರ್:
ಶ್ರಾವಣ ಅಮಾವಾಸ್ಯೆ ಹಾಗೂ ಹರಿಯಾಳಿ ಅಮಾವಾಸ್ಯೆಯ ಪವಿತ್ರ ಸಂದರ್ಭದಲ್ಲಿ ಉಜ್ಜಯಿನಿಯ ವಿಶ್ವಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಬುಧವಾರ ಮುಂಜಾನೆ ವಿಶೇಷ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಸ್ಮಾರತಿ ನೆರವೇರಿತು. ಈ ವೇಳೆ ಭಗವಾನ್ ಮಹಾಕಾಳನಿಗೆ ಭಾಂಗ್, ಚಂದನ ಹಾಗೂ ಬೆಳ್ಳಿ ಆಭರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು, ರಾಜಸ್ವರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದರು.
ಮುಂಜಾನೆ ಸುಮಾರು 2.30ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಯಿತು. ವೀರಭದ್ರನಿಗೆ ನಮಸ್ಕರಿಸಿ ಸ್ವಸ್ತಿವಾಚನ ನೆರವೇರಿಸಿದ ಬಳಿಕ ಬೆಳ್ಳಿಯ ಬಾಗಿಲು ತೆರೆಯಲಾಯಿತು. ಗರ್ಭಗುಡಿಯಲ್ಲಿ ಮಹಾಕಾಳ ಸೇರಿದಂತೆ ದೇವ-ದೇವತೆಗಳಿಗೆ ಪೂಜೆ ಸಲ್ಲಿಸಿ, ಪವಿತ್ರ ಜಲ, ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ ಹಾಗೂ ಹಣ್ಣಿನ ರಸದಿಂದ ತಯಾರಿಸಿದ ಪಂಚಾಮೃತದಿಂದ ಅಭಿಷೇಕ ಮಾಡಲಾಯಿತು.
ಅಭಿಷೇಕದ ಬಳಿಕ ಮಹಾಕಾಳನಿಗೆ ಭಾಂಗ್, ಚಂದನ, ಬೆಳ್ಳಿ ಕಿರೀಟ, ಬೆಳ್ಳಿ ಮುಂಡಮಾಲೆ, ರುದ್ರಾಕ್ಷಿ ಮಾಲೆ ಹಾಗೂ ಸುಗಂಧಭರಿತ ಹೂವಿನ ಮಾಲೆಗಳಿಂದ ಅಲಂಕಾರ ಮಾಡಲಾಯಿತು. ಭಸ್ಮಾರತಿಯ ವೇಳೆ ಮಹಾಕಾಳನ ರಾಜಸ್ವರೂಪ ಭಕ್ತರ ಪ್ರಮುಖ ಆಕರ್ಷಣೆಯಾಯಿತು.
ದೇವಸ್ಥಾನದ ಸಂಪ್ರದಾಯದಂತೆ ಮಹಾ ನಿರ್ವಾಣಿ ಅಖಾಡದ ವತಿಯಿಂದ ಮಹಾಕಾಳನಿಗೆ ಭಸ್ಮ ಅರ್ಪಿಸಲಾಯಿತು. ಭಸ್ಮಾರತಿ ವೇಳೆ ನಂದಿ ಹಾಲ್ನಲ್ಲಿ ನಂದಿ ಮಹಾರಾಜರಿಗೆ ಸ್ನಾನ, ಧ್ಯಾನ ಹಾಗೂ ಪೂಜೆ ನೆರವೇರಿಸಲಾಯಿತು. ಭಕ್ತರು ನಂದಿಯ ಕಿವಿಯಲ್ಲಿ ತಮ್ಮ ಹರಕೆ ಹಾಗೂ ಮನೋಕಾಮನೆಗಳನ್ನು ಹೇಳಿಕೊಂಡು ಮಹಾಕಾಳನಲ್ಲಿ ಪ್ರಾರ್ಥಿಸಿದರು.
ಭಸ್ಮಾರತಿ ಬಳಿಕ ‘ಜೈ ಶ್ರೀ ಮಹಾಕಾಳ’, ‘ಹರ ಹರ ಮಹಾದೇವ’ ಎಂಬ ಘೋಷಣೆಗಳಿಂದ ದೇವಸ್ಥಾನ ಆವರಣ ಮೊಳಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಮಹಾಕಾಳನ ದಿವ್ಯ ರಾಜಸ್ವರೂಪದ ದರ್ಶನ ಪಡೆದು ಪುಣ್ಯಲಾಭ ಪಡೆದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.