
ನವದೆಹಲಿ, 12 ಆಗಸ್ಟ್ (ಹಿ.ಸ.):
ಆ್ಯಂಕರ್:ಸಂಸತ್ನ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸರ್ಕಾರ ಎಲ್ಲ ವಿಷಯಗಳ ಕುರಿತು ಚರ್ಚೆಗೆ ಸಿದ್ಧವಿದೆ ಎಂದು ಬುಧವಾರ ಸ್ಪಷ್ಟಪಡಿಸಿದರು. ಪ್ರತಿಪಕ್ಷಗಳು ಮಧ್ಯಾಹ್ನ 3 ಗಂಟೆಯೊಳಗೆ ಲೋಕಸಭಾ ಸ್ಪೀಕರ್ಗೆ ಚರ್ಚೆಗೆ ಸಂಬಂಧಿಸಿದಂತೆ ಪತ್ರ ನೀಡಿದರೆ, ಮಧ್ಯಾಹ್ನ 3 ಗಂಟೆಯಿಂದ ಮರುದಿನ 3 ಗಂಟೆಯವರೆಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದರು.
ಸಂಸತ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾ, ಅಧಿವೇಶನ ಆರಂಭವಾದಾಗಿನಿಂದ ತಾವು ನಿರಂತರವಾಗಿ ಸಂಸತ್ಗೆ ಬರುತ್ತಿದ್ದು, ತಮ್ಮ ಕಚೇರಿಯಲ್ಲಿಯೇ ಇರುತ್ತಿದ್ದೇನೆ. ಆದರೆ ಪ್ರತಿಪಕ್ಷಗಳು ಎರಡೂ ಸದನಗಳ ಕಲಾಪ ನಡೆಯಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಹೀಗಿರುವಾಗ ಸದನದೊಳಗೆ ತೆರಳಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ನಿಜವಾಗಿ ಯಾರು ಸಂಸತ್ನಿಂದ ದೂರ ಓಡುತ್ತಿದ್ದಾರೆ ಎಂಬುದನ್ನು ಜನರೇ ನಿರ್ಧರಿಸಬೇಕು ಎಂದರು.
ನೀಟ್ಗೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರತಿಭಟನೆ ಸೇರಿದಂತೆ ಎಲ್ಲ ವಿಚಾರಗಳ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಶಾ ಹೇಳಿದರು. ಚರ್ಚೆಗೆ ಸಮಯ ನಿಗದಿಪಡಿಸಬೇಕೆಂಬುದು ಪ್ರತಿಪಕ್ಷಗಳ ಆರಂಭಿಕ ಬೇಡಿಕೆಯಾಗಿತ್ತು. ಅದಕ್ಕೂ ಸರ್ಕಾರ ಒಪ್ಪಿಕೊಂಡಿದೆ. ಸಂಸತ್ನಲ್ಲಿ ಕೇಳಲಾಗುವ ಪ್ರತಿಯೊಂದು ಪ್ರಶ್ನೆಗೂ ತಾವು ಉತ್ತರಿಸಲು ಸಿದ್ಧವಿರುವುದಾಗಿ ಅವರು ತಿಳಿಸಿದರು.
ಸರ್ಕಾರಕ್ಕೆ ಮುಚ್ಚಿಡಲು ಯಾವುದೇ ವಿಷಯವಿಲ್ಲ. ಕೇವಲ ಹೇಳಿಕೆ ನೀಡುವುದಕ್ಕಿಂತ ಸಂಸದೀಯ ನಿಯಮಗಳು ಮತ್ತು ಸ್ಥಾಪಿತ ಪ್ರಕ್ರಿಯೆಗಳ ಅಡಿಯಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂಬುದು ಸರ್ಕಾರದ ನಿಲುವು ಎಂದು ಶಾ ಹೇಳಿದರು. ಗಂಭೀರ ವಿಚಾರಗಳ ಕುರಿತು ಸಂಸತ್ನಲ್ಲಿ ವಿಸ್ತೃತ ಚರ್ಚೆ ನಡೆಯುವುದು ಸಂಸದೀಯ ಪ್ರಜಾಪ್ರಭುತ್ವದ ವಿಧಾನವಾಗಿದೆ ಎಂದರು.
ಮಧ್ಯಾಹ್ನ 3 ಗಂಟೆಯಿಂದ ಮರುದಿನ 3 ಗಂಟೆಯವರೆಗೆ ನಿರಂತರವಾಗಿ ಚರ್ಚೆ ನಡೆಸಲು ತಾವು ಸಿದ್ಧವಿದ್ದು, ಅಗತ್ಯವಿದ್ದರೆ ತಡರಾತ್ರಿಯವರೆಗೂ ಸದನದಲ್ಲಿ ಕುಳಿತು ಚರ್ಚೆ ಮುಂದುವರಿಸಲು ಸಿದ್ಧ ಎಂದು ಗೃಹ ಸಚಿವರು ಹೇಳಿದರು. ಲೋಕಸಭಾ ಸ್ಪೀಕರ್ ಅನುಮತಿ ನೀಡಿದರೆ ಪ್ರಶ್ನೋತ್ತರ ಅವಧಿಯನ್ನು ಮುಂದೂಡಿ ಚರ್ಚೆ ನಡೆಸಲು ಕೂಡ ತಾವು ಸಿದ್ಧವಿರುವುದಾಗಿ ತಿಳಿಸಿದರು.
ಚರ್ಚೆಯ ಸಂಪೂರ್ಣ ಅವಧಿಯಲ್ಲಿ ಸದನದಲ್ಲಿ ಹಾಜರಿದ್ದು, ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿ, ಪ್ರಮುಖ ಅಂಶಗಳನ್ನು ದಾಖಲಿಸಿಕೊಂಡು ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವುದಾಗಿ ಶಾ ಹೇಳಿದರು. ಈ ಮೂಲಕ ದೇಶದ ಜನರ ಮುಂದೆ ವಿಚಾರದ ಸಂಪೂರ್ಣ ಸತ್ಯವನ್ನು ಸ್ಪಷ್ಟಪಡಿಸಲು ಸಾಧ್ಯವಾಗಲಿದೆ ಎಂದರು.
ಪ್ರತಿಪಕ್ಷಗಳು ಸಂಸತ್ನಲ್ಲಿ ಚರ್ಚೆ ನಡೆಸಲು ಬಯಸುತ್ತವೆಯೇ ಅಥವಾ ಗದ್ದಲ ಮಾಡಲು ಬಯಸುತ್ತವೆಯೇ ಎಂಬುದನ್ನು ಈಗ ತಾವೇ ನಿರ್ಧರಿಸಬೇಕು ಎಂದು ಶಾ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಸರ್ಕಾರ ಎಲ್ಲ ವಿಷಯಗಳ ಕುರಿತು ಚರ್ಚೆಗೆ ಸಿದ್ಧವಿದೆ. ಆದ್ದರಿಂದ ಪ್ರತಿಪಕ್ಷಗಳು ಸಂಸತ್ನ ಕಲಾಪ ಸುಗಮವಾಗಿ ನಡೆಯಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇತ್ತೀಚಿನ ಸಾರ್ವಜನಿಕ ಹಾಗೂ ಸಂಸದೀಯ ಚರ್ಚೆಗಳಲ್ಲಿ ‘ಕಾಣೆಯಾಗಿದ್ದಾರೆ’ ಮತ್ತು ‘ಓಡಿಹೋಗಿದ್ದಾರೆ’ ಎಂಬ ಪದಗಳು ಹೆಚ್ಚಾಗಿ ಕೇಳಿಬರುತ್ತಿವೆ ಎಂದು ಶಾ ಹೇಳಿದರು. ಸಂಸತ್ನಲ್ಲಿ ತಮ್ಮ ಹಾಜರಾತಿ ಕುರಿತು ಪ್ರತಿಪಕ್ಷಗಳು ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿವೇಶನ ಆರಂಭವಾದಾಗಿನಿಂದ ನಿರಂತರವಾಗಿ ಸಂಸತ್ಗೆ ಬರುತ್ತಿದ್ದು, ಸದನದ ಕಲಾಪ ನಡೆದರೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿರುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.