




ಬಳ್ಳಾರಿ, 02 ಜುಲೈ (ಹಿ.ಸ.)
ಆ್ಯಂಕರ್ : ನಗರದ ವಿವಿಧ ವಾರ್ಡ್ಗಳಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಾಗ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಕಾಯ್ದಿರಿಸಿದ ಜಾಗಗಳಲ್ಲಿ ಅತಿಕ್ರಮವಾಗಿ ಆಕ್ರಮಿಸಿಕೊಂಡಿರುವುದನ್ನು ಖಚಿತಪಡಿಸಿಕೊಂಡು ಜಿಲ್ಲಾಡಳಿತ ಗುರುವಾರ ಒತ್ತುವರಿ ಕಾರ್ಯಾಚರಣೆ ನಡೆಸಿದೆ.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರ ನಿರ್ದೇಶನದಂತೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಹಾಗೂ ತಹಶೀಲ್ದಾರ್ ಟಿ.ರೇಖಾ ನೇತೃತ್ವದ ಅಧಿಕಾರಿಗಳ ತಂಡವು ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕ ಮತ್ತು ಸರ್ಕಾರಿ ಜಾಗಗಳನ್ನು ರಕ್ಷಿಸಲಾಯಿತು.
ಬೆಳ್ಳಂಬೆಳಗ್ಗೆ ವಿವಿಧ ಯಂತ್ರೋಪಕರಣಗಳ ಮೂಲಕ ಸರ್ಕಾರಕ್ಕೆ ಸೇರಬೇಕಾದ ಜಾಗಗಳನ್ನು ಜಿಲ್ಲಾಡಳಿತದ ವತಿಯಿಂದ ತೆರವುಗೊಳಿಸಲಾಯಿತು.
ಬಳ್ಳಾರಿ ನಗರದ ಸಿಟಿಎಸ್ ವಾರ್ಡ್ ನಂ. 21, ಬ್ಲಾಕ್ ನಂ. 03 ರ ಟಿ.ಎಸ್ ನಂ. 41 ರಲ್ಲಿದ್ದ 0.08 ಸೆಂಟ್ಸ್ ಜಾಗವನ್ನು ಅಂಗನವಾಡಿ ಕೇಂದ್ರಕ್ಕೆ ನಿಗದಿಪಡಿಸಲಾಗಿದ್ದು, ಇಲ್ಲಿ ಅತಿಕ್ರಮಣಗೊಂಡ ಜಾಗವನ್ನು ಸುಪರ್ದಿಗೆ ಪಡೆದುಕೊಂಡು ಅತಿಕ್ರಮಣದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಬೋರ್ಡ್ ಹಾಕಲಾಗಿದೆ.
ವಾರ್ಡ್ ನಂ. 22, ಬ್ಲಾಕ್ ನಂ. 11 ರ ಟಿ.ಎಸ್ ನಂ. 94 ವಿ ಯಲ್ಲಿರುವ ಸುಮಾರು 0.49.6 ಸೆಂಟ್ಸ್ ವಿಸ್ತೀರ್ಣದ ಕರ್ನಾಟಕ ಸರ್ಕಾರದ ಬಯಲು ಜಾಗವನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.
ಅದೇ ರೀತಿ ವಾರ್ಡ್ ನಂ. 21, ಬ್ಲಾಕ್ ನಂ. 03 ರ ಟಿ.ಎಸ್ ನಂ. 43 ರ ಪೈಕಿ ವಿ ಯಲ್ಲಿರುವ 0.75 ಸೆಂಟ್ಸ್ ಜಾಗವು ಸಂಪೂರ್ಣ ಸರ್ಕಾರಿ ಸ್ವತ್ತಾಗಿದ್ದು, ಅಕ್ರಮ ಪ್ರವೇಶ ಅಥವಾ ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ನಗರದ ಬುಡಾ ಪಾರ್ಕ್, ನಾರಾಯಣಪ್ಪ ಕಾಂಪೌ0ಡ್, ಕೋಟೆ ಪ್ರದೇಶ ಹಾಗೂ ಸಿದ್ದಾರ್ಥ ನಗರ, ದೇವಿ ನಗರದ ಸರ್ಕಾರಿ ಜಾಗಗಳಿಗೆ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳೊ0ದಿಗೆ ಭೇಟಿ ನೀಡಿ ಒತ್ತುವರಿ ತೆರವು ಹಾಗೂ ರಕ್ಷಣಾ ಕಾರ್ಯ ಕೈಗೊಂಡರು.
ಸರ್ಕಾರಿ ಆಸ್ತಿಯನ್ನು ಸಾರ್ವಜನಿಕರ ಹಿತಬಲಿಗಾಗಿ ಕಾಯ್ದಿರಿಸಲಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಇದನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಡಿಡಿಎಲ್ಆರ್ ಪ್ರಮೋದ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಖಲೀಲ್ ಸಾಬ್ ಸೇರಿದಂತೆ ಇತರರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್