
ಕೋಲಾರ. ೦೨ ಜುಲೈ (ಹಿ.ಸ)
ಆಂಕರ್ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಂಬಂಧಿಕರೊಬ್ಬರ ಸಾವಿನ ಹಿನ್ನಲೆ ಅಂತಿಮ ದರ್ಶನಕ್ಕಾಗಿ ಗುರುವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದ್ದು, ಪಕ್ಷದ ರಾಷ್ಟಿçಯ ಅಧ್ಯಕ್ಷರೇ ಇಲ್ಲಿಗೆ ಬಂದರೂ ಜಿಲ್ಲೆಯ ಯಾವೊಬ್ಬ ಶಾಸಕರೂ ಅವರನ್ನು ಸ್ವಾಗತಿಸಲು ಇತ್ತ ಸುಳಿಯಲಿಲ್ಲ.
ಖರ್ಗೆಯವರ ಬೀಗರು ಮತ್ತು ಮಗಳ ಅತ್ತೆ ಜಗದಾಂಬ ಎಂಬುವವರು ಇಲ್ಲಿನ ಸಿ.ಬೈರೇಗೌಡ ನಗರದ ನಿವಾಸದಲ್ಲಿ ಮೃತಪಟ್ಟಿದ್ದರು. ಅಂತಿಮ ದರ್ಶನಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಆಗಮಿಸಿದ್ದರು.
ಮೃತದೇಹಕ್ಕೆ ಪುಷ್ಪನಮನ ಸಲ್ಲಿಸಿದ ಖರ್ಗೆಯವರೊಂದಿಗೆ ಆನೇಕಲ್ ಶಾಸಕ ಶಿವಣ್ಣ, ಎಸಿಪಿ ಸುಧಾಕರ್, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಡಾ.ಗೋವಿಂದರಾಜು, ಮಾಜಿ ಸದಸ್ಯರಾಸ ಎಸ್.ಆರ್.ಮುರಳಿಗೌಡ, ಸೋಮಶೇಖರ್, ಜಿಪಂ ಮಾಜಿ ಸದಸ್ಯ ನಾರಾಯಣಸ್ವಾಮಿ, ಇರಗಸಂದ್ರ ಪ್ರತಾಪ್, ಜೆ.ಶ್ರೀನಿವಾಸ್, ಕೆಜಿಎಫ್ ಕಾರ್ತಿಕ್, ಜಯಪಾಲ್, ಮುಖಂಡರಾದ ಎಂ.ನಾರಾಯಾಣ್, ಜಗನ್ನಾಥ್,ವೆಂಕಟಪತಿ, ಹರೀಶ್, ಚಂದ್ರಮೌಳಿ, ದಲಿತನಾರಾಯಣಸ್ವಾಮಿ ಮತ್ತಿತರರು ಖರ್ಗೆಯವರು ಅಂತಿಮ ದರ್ಶನ ಪಡೆದು ಹೊರಡುವವರೆಗೂ ಜತೆಯಲ್ಲೇ ಇದ್ದರು.
ಈ ನಡುವೆ ಮಂತ್ರಿ ಸ್ಥಾನಕ್ಕಾಗಿ ದೆಹಲಿಯಲ್ಲಿ ದುಂಬಾಲು ಬೀಳಲು ಖರ್ಗೆಯವರ ಬಳಿಗೆ ಹೋಗಿದ್ದ ಜಿಲ್ಲೆಯ ಯಾವೊಬ್ಬ ಶಾಸಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಹಾಜರಿರಬೇಕೆಂಬ ಶಿಷ್ಟಾಚಾರವನ್ನೂ ಪಾಲಿಸಲಿಲ್ಲ.
ಖರ್ಗೆಯವರು ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಜಾರಿಕೆ ಉತ್ತರ ನೀಡಿದರೂ, ಖರ್ಗೆಯವರು ಬರುವ ವಿಷಯ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು, ಪಕ್ಷದ ನೂರಾರು ಕಾರ್ಯಕರ್ತರಿಗೆ ತಿಳಿದಿದ್ದರೂ ಜನರಿಂದ ಆಯ್ಕೆಯಾಗಿರುವ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಕೊತ್ತೂರು ಮಂಜುನಾಥ್,ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾಶಶಿಧರ್,ಕೆ.ವೈ.ನಂಜೇಗೌಡ, ವಿಧಾನಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಇವರ ಗಮನಕ್ಕೆ ಬರಲಿಲ್ಲವೇ ಎಂಬುದು ಪ್ರಶ್ನಾರ್ಹ.
ಮಂತ್ರಿ ಪದವಿಗಾಗಿ ದೆಹಲಿಗೆ ಹೋಗಿ ಖರ್ಗೆಯವರಿಗೆ ದುಂಬಾಲು ಬಿದ್ದಿದ್ದ ಶಾಸಕರು ಅದೇ ರಾಷ್ಟ್ರೀಯ ಅಧ್ಯಕ್ಷರು ಕೋಲಾರಕ್ಕೆ ಬಂದರೂ ಅವರತ್ತ ಸುಳಿಯದೇ ಇದ್ದದ್ದು ಮಾತ್ರ ಆಶ್ಚರ್ಯ ತರಿಸುವು ವಿಷಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್