ಹುಬ್ಬಳ್ಳಿಯ ಆರಾಧ್ಯ ದೇವತೆ ಶ್ರೀ ಗಾಳಿ ದುರ್ಗಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ
ಹುಬ್ಬಳ್ಳಿ, 17 ಜುಲೈ (ಹಿ.ಸ.): ಆ್ಯಂಕರ್: ಹುಬ್ಬಳ್ಳಿಯ ಪ್ರಸಿದ್ಧ ಗ್ರಾಮದೇವತೆ ಹಾಗೂ ಆರಾಧ್ಯ ದೇವತೆ ಶ್ರೀ ಗಾಳಿ ದುರ್ಗಮ್ಮ ತಾಯಿಯ ಭಂಡಾರ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು. ದೇವಸ್ಥಾನದ ಸಮಿತಿ ಅಧ್ಯಕ್ಷ ಸಂತೋಷ್ ಲಕ್ಷ್ಮಣ ಹಿರೇಕೆರೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಗಾಳಿ ದುರ್ಗಮ್ಮ ದೇವಿ


ದೇವಸ್ಥಾನ ಸಮಿತಿ ಸಭೆ


ಹುಬ್ಬಳ್ಳಿ, 17 ಜುಲೈ (ಹಿ.ಸ.):

ಆ್ಯಂಕರ್:

ಹುಬ್ಬಳ್ಳಿಯ ಪ್ರಸಿದ್ಧ ಗ್ರಾಮದೇವತೆ ಹಾಗೂ ಆರಾಧ್ಯ ದೇವತೆ ಶ್ರೀ ಗಾಳಿ ದುರ್ಗಮ್ಮ ತಾಯಿಯ ಭಂಡಾರ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು. ದೇವಸ್ಥಾನದ ಸಮಿತಿ ಅಧ್ಯಕ್ಷ ಸಂತೋಷ್ ಲಕ್ಷ್ಮಣ ಹಿರೇಕೆರೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಶಿವಣ್ಣ ಯಲ್ಲಪ್ಪ ಹಿರೇಕೆರೂರ,ಪ್ರಭು ಹಿರೇಕೆರೂರ, ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಸೇರಿದಂತೆ ದೇವಸ್ಥಾನದ ಪದಾಧಿಕಾರಿಗಳು, ಹಿರಿಯರು, ಸೇವಾ ಯುವಕ ಮಂಡಳಿ, ವೀರ ಮಾರುತಿ ಯುವಕರ ಬಳಗ ಹಾಗೂ ಹೊಸೂರಿನ ಗುರು-ಹಿರಿಯರು, ತಾಯಂದಿರು ಮತ್ತು ಯುವಕರು ಭಾಗವಹಿಸಿದರು.

ಸಭೆಯಲ್ಲಿ ಸುಮಾರು 46 ವರ್ಷಗಳ ಹಿಂದೆ ಹಿರಿಯರಾದ ಯಲ್ಲಪ್ಪ ಹನಮಂತಪ್ಪ ಹಿರೇಕೆರೂರ ಹಾಗೂ ಲಕ್ಷ್ಮಣ ಹನಮಂತಪ್ಪ ಹಿರೇಕೆರೂರ ಅವರ ನೇತೃತ್ವದಲ್ಲಿ ಆರಂಭಗೊಂಡ ಈ ಪಾರಂಪರಿಕ ಜಾತ್ರಾ ಮಹೋತ್ಸವದ ಇತಿಹಾಸವನ್ನು ಸ್ಮರಿಸಲಾಯಿತು. ಅಂದಿನಿಂದ ಇಂದಿನವರೆಗೆ ಜಾತ್ರೆಯನ್ನು ಪುರಾತನ ಸಂಪ್ರದಾಯವನ್ನು ಉಳಿಸಿಕೊಂಡು ಭಕ್ತಿ, ಶ್ರದ್ಧೆ ಹಾಗೂ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಲಾಯಿತು.

ಈ ವರ್ಷದ ಜಾತ್ರೆಯ ಅಂಗವಾಗಿ ವಾರ ಹಿಡಿಯುವ ಕಾರ್ಯಕ್ರಮವು ಜುಲೈ 21ರಿಂದ ಆಗಸ್ಟ್ 4, 2026ರವರೆಗೆ ನಡೆಯಲಿದ್ದು, ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಆಗಮಿಸುವ ಸಾವಿರಾರು ಭಕ್ತರಿಗೆ ಸುಗಮ ದರ್ಶನ, ಕುಡಿಯುವ ನೀರು, ಪ್ರಸಾದ, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿದಿನ ರಾತ್ರಿ 8.30 ಗಂಟೆಗೆ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದ್ದು, ಬಳಿಕ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಕಾಪಾಡುವಂತೆ ಸಭೆಯಲ್ಲಿ ಒತ್ತಿ ಹೇಳಲಾಯಿತು. ಭಂಡಾರ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವವನ್ನು ಪುರಾತನ ಸಂಪ್ರದಾಯದಂತೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.

ವಾರದ ದಿನಗಳು

- ಮೊದಲನೇ ವಾರ – 21-07-2026 (ಮಂಗಳವಾರ)

- ಎರಡನೇ ವಾರ – 24-07-2026 (ಶುಕ್ರವಾರ)

- ಮೂರನೇ ವಾರ – 28-07-2026 (ಮಂಗಳವಾರ)

- ನಾಲ್ಕನೇ ವಾರ – 31-07-2026 (ಶುಕ್ರವಾರ)

- ಐದನೇ ವಾರ – 04-08-2026 (ಮಂಗಳವಾರ)

ಭಂಡಾರ ಜಾತ್ರಾ ಮಹೋತ್ಸವವು ಆಗಸ್ಟ್ 4, 2026 (ಮಂಗಳವಾರ) ರಂದು ವಿಜೃಂಭಣೆಯಿಂದ ನಡೆಯಲಿದೆ.

ವಾರದ ದಿನಗಳಲ್ಲಿ ಭಕ್ತರು ಸಂಪ್ರದಾಯದಂತೆ ತೆಂಗಿನಕಾಯಿ ಒಡೆಯದಿರುವುದು, ಮನೆಯಲ್ಲಿ ಕುಟ್ಟುವುದು, ಬೀಸುವುದು ಹಾಗೂ ರೊಟ್ಟಿ ಮಾಡುವುದನ್ನು ತಡೆಯುವುದು ಸೇರಿದಂತೆ ಆಚರಣೆಗಳನ್ನು ಶ್ರದ್ಧಾಭಕ್ತಿಯಿಂದ ಪಾಲಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಲಾಗಿದೆ.

ಜಾತ್ರಾ ಮಹೋತ್ಸವದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ಗಾಳಿ ದುರ್ಗಮ್ಮ ತಾಯಿಯ ದಿವ್ಯ ಆಶೀರ್ವಾದ ಪಡೆಯುವಂತೆ ಹಾಗೂ ಜಾತ್ರೆಯ ಯಶಸ್ಸಿಗೆ ಸಹಕರಿಸುವಂತೆ ದೇವಸ್ಥಾನ ಸಮಿತಿಯು ಸರ್ವ ಭಕ್ತರಲ್ಲಿ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande