


ಬಳ್ಳಾರಿ, 09 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ವಿದ್ಯಾನಗರದಲ್ಲಿ ಇರುವ `ಸ್ನೇಹ ಡಯಾಗ್ನೋಸ್ಟಿಕ್ ಸೆಂಟರ್'ನಲ್ಲಿ ಲ್ಯಾಬ್ ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಅಪಹರಿಸಿ, ಕೊಲೆ ಮಾಡಿ, ಶವವನ್ನು ಸುಟ್ಟು ಅರೆಬೆಂದ ಸ್ಥಿತಿಯಲ್ಲಿ ಬಿಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದ್ದು, ಸೋಮವಾರ ಬಯಲಿಗೆ ಬಂದಿದೆ.
ಮೃತನು ಕರ್ನಾಟಕ - ಆಂಧ್ರದ ಗಡಿ ಭಾಗದಲ್ಲಿರುವ ಬಲಗುಡ್ಡ ಗ್ರಾಮ (ಈ ಗ್ರಾಮಸ್ಥರು ಬಹುತೇಕ ಬಳ್ಳಾರಿಯ ಮೇಲೆ ಅವಲಂಭಿತರು) ನಿವಾಸಿ ಲ್ಯಾಬ್ ಟೆಕ್ನೀಷಿಯನ್ ಬಸವನಗೌಡ (27) ಎಂದು ಪೊಲೀಸರು ತಿಳಿಸಿದ್ದಾರೆ.
ಲ್ಯಾಬ್ ಟೆಕ್ನೀಷಿಯನ್ ಬಸವನಗೌಡನ ಅರೆಸುಟ್ಟ ಶವವು ಮೋಕಾ ಸಮೀಪದ ತಂಬ್ರಹಳ್ಳಿ ಕಾಲುವೆಯ ಬಳಿ ಸಿಕ್ಕಿದ್ದು, ದುಷ್ಕರ್ಮಿಗಳು ಪುಸಲಾಯಿಸಿ ಕರೆದುಕೊಂಡು ಹೋಗಿ, ಕೊಲೆ ಮಾಡಿ ಆ ನಂತರ ಸಾಕ್ಷಿ ನಾಶಕ್ಕಾಗಿ ಪ್ರಯತ್ನಿಸಿ ಶವವನ್ನು ಸುಡಲು ಯತ್ನಿಸಿದ್ಧಾರೆ. ಆದರೆ, ಮಳೆಯ ಕಾರಣವೋ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ ಯುವಕನ ದೇಹವು ಅರೆಬೆಂದ ಸ್ಥಿತಿಯಲ್ಲಿ ಸಿಕ್ಕಿದೆ.
ಲ್ಯಾಬ್ ಟೆಕ್ನೀಷಿಯನ್ ಬಸವನಗೌಡ ಅವರು ಶನಿವಾರ ಸಂಜೆ ಅವರ ಸಹೋದರ ಅತ್ತೆಗೆ ಕರೆ ಮಾಡಿ, `ನಾನು, ಪ್ರೀತಿಸಿದ ಹುಡುಗಿಯನ್ನು ಮದುವೆ ಆಗುತ್ತಿರುವೆ. ಮಾಮನಿಗೆ -ಅಪ್ಪನಿಗೆ ತಿಳಿಸು' ಎಂದು ತಿಳಿಸಿದ್ದನು ಎಂದು ಹೇಳಲಾಗಿದೆ. ಅಲ್ಲದೇ, ಬಸವನಗೌಡನು ಓರ್ವ ಯುವತಿಯ ಜೊತೆಯಲ್ಲಿ ದ್ವಿಚಕ್ರ ವಾಹನದಲ್ಲಿದ್ದಿದ್ದು, ಆ ಯುವತಿಯ ಕಡೆಯವರೇ ಈ ಘಟನೆಗೆ ಕಾರಣವಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಆದರೆ, ಲ್ಯಾಬ್ ಟೆಕ್ನೀಷಿಯನ್ ಬಸವನಗೌಡನ ಮೊಬೈಲ್ ಸಂಖ್ಯೆಯಿಂದ ಬೆಂಗಳೂರು ಲೊಕೇಷನ್ನಿಂದ ಈತನ ಅತ್ತೆಗೆ ಕನ್ನಡದಲ್ಲಿ ಒಂದು ಎಸ್ಎಂಎಸ್ ಮೆಸೇಜ್ ಬಂದಿದ್ದು, ತನಿಖೆಯ ಅನೇಕ ವಿಚಾರಗಳು ಸಂಶಯಗಳಿಗೆ ಕಾರಣವಾಗಿವೆ. ಪೊಲೀಸರಿಗೆ ಮೃತನ ಮೊಬೈಲ್ ಫೋನ್ ಸಿಕ್ಕಿಲ್ಲ, ಅಲ್ಲದೇ ಮೊಬೈಲ್ ಫೋನ್ನ ಲೊಕೇಷನ್ ಕೂಡ ಸಿಗುತ್ತಿಲ್ಲ ಎನ್ನಲಾಗಿದೆ.
ದುಷ್ಕರ್ಮಿಗಳು ಲ್ಯಾಬ್ ಟೆಕ್ನೀಷಿಯನ್ ಬಸವನಗೌಡನ ಕುತ್ತಿಗೆಗೆ ಹಗ್ಗವನ್ನು ಬಿಗಿಯಾಗಿ ಬಿಗಿದು, ಉಸಿರುಗಟ್ಟಿಸಿ, ಕೊಲೆ ಮಾಡಿದ್ದಾರೆ. ಈತನನ್ನು ಕೊಲೆ ಮಾಡುವ ಪ್ಲಾನ್ ಮಾಡಿ ಆತನನ್ನು ಬಳ್ಳಾರಿಯಿಂದ 13 ಕಿಲೋ ಮೀಟರ್ ದೂರದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಕೊಲೆ ಮಾಡಿ, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಮೃತನ ದ್ವಿಚಕ್ರ ವಾಹನ ಮತ್ತು ಚಪ್ಪಲಿ ಸಿಕ್ಕಿವೆ. ಆದರೆ, ದುಷ್ಕರ್ಮಿಗಳ ಸುಳಿವು ಸಿಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮಂಗಳವಾರ ಬೆಳಗ್ಗೆ ಪೋಸ್ಟ್ಮಾರ್ಟ್ಂ ನಡೆಸಲಾಗಿದೆ. ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಸಿಂಧನೂರು - ಲಿಂಗಸೂಗೂರು ನಿವಾಸಿ, ಬಳ್ಳಾರಿಯಲ್ಲಿದ್ದ ಓರ್ವ ವಿದ್ಯಾರ್ಥಿಯನ್ನು ಕೂಡ ಆತನ ಸ್ನೇಹಿತರು ಕೆಲ ತಿಂಗಳುಗಳ ಹಿಂದೆ ವಿಡಪನಕಲ್ಲು ಗ್ರಾಮದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ, ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿ, ಸೆರೆ ಸಿಕ್ಕಿದ್ದರು. ಈ ಘಟನೆಯೂ ಇದೇ ರೀತಿಯಲ್ಲಿ ನಡೆದಿದ್ದು, ಅನೇಕ ಪೋಷಕರು ತೀವ್ರ ಆತಂಕಕ್ಕೆ ಈಡಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್