
ನವದೆಹಲಿ, 26 ಜೂನ್ (ಹಿ.ಸ.) :
ಆ್ಯಂಕರ್ : ಛತ್ರಪತಿ ಶಾಹೂಜಿ ಮಹಾರಾಜರ ಜಯಂತಿ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಗಣ್ಯರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ, ದೂರದೃಷ್ಟಿಯ ಸಮಾಜ ಸುಧಾರಕ ಹಾಗೂ ಪ್ರಗತಿಪರ ಆಡಳಿತಗಾರರಾದ ರಾಜರ್ಷಿ ಛತ್ರಪತಿ ಶಾಹೂಜಿ ಮಹಾರಾಜರಿಗೆ ಕೋಟಿ ಕೋಟಿ ನಮನ ಸಲ್ಲಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ, ಸಮಾನ ಅವಕಾಶ ಮತ್ತು ನ್ಯಾಯ ದೊರೆತಾಗ ಮಾತ್ರ ರಾಷ್ಟ್ರದ ನಿಜವಾದ ಪ್ರಗತಿ ಸಾಧ್ಯ ಎಂಬ ಸಂದೇಶವನ್ನು ಅವರ ಜೀವನ ಸಾರುತ್ತದೆ ಎಂದು ಹೇಳಿದರು. ಸಮರಸ, ಸಮಾನತೆಯ ಮತ್ತು ನ್ಯಾಯಯುತ ಭಾರತದ ನಿರ್ಮಾಣದ ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಹಾಗೂ ಪ್ರೇರಣಾದಾಯಕವಾಗಿವೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸಾಮಾಜಿಕ ಸಮಾನತೆಯ ಹರಿಕಾರರಾದ ಶಾಹೂಜಿ ಮಹಾರಾಜರು ಸಮಾವೇಶಿತ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಜನಕೇಂದ್ರಿತ ಆಡಳಿತಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು.
ಮಹಿಳಾ ಶಿಕ್ಷಣ, ವಿದ್ಯಾರ್ಥಿವೇತನ ವ್ಯವಸ್ಥೆ ಹಾಗೂ ಶಿಕ್ಷಣದ ವಿಸ್ತರಣೆಯ ಮೂಲಕ ಅವರು ಸಾಮಾಜಿಕ ಸಬಲೀಕರಣಕ್ಕೆ ಹೊಸ ದಿಕ್ಕು ನೀಡಿದರು. ಅವರ ಚಿಂತನೆಗಳು ರಾಷ್ಟ್ರ ನಿರ್ಮಾಣಕ್ಕೆ ಸದಾ ಪ್ರೇರಣೆಯಾಗಿವೆ ಎಂದು ತಿಳಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಪ್ರಾಥಮಿಕ ಶಿಕ್ಷಣದ ವಿಸ್ತರಣೆ, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಸೇರಿದಂತೆ ಹಲವು ಮಹತ್ವದ ಸಮಾಜ ಸುಧಾರಣಾ ಕ್ರಮಗಳನ್ನು ಶಾಹೂಜಿ ಮಹಾರಾಜರು ಜಾರಿಗೆ ತಂದಿದ್ದರು. ಸಮಾಜ ಸುಧಾರಣೆಗೆ ಅವರ ಕೊಡುಗೆ ಅಮೂಲ್ಯವಾಗಿದೆ ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಅಸ್ಪೃಶ್ಯತೆ ಮತ್ತು ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡಿದ ಶಾಹೂಜಿ ಮಹಾರಾಜರು ಸಮಾನತೆ ಮತ್ತು ಸಮಾವೇಶಿತ ಸಮಾಜದ ಭದ್ರ ಅಡಿಪಾಯ ಹಾಕಿದರು ಎಂದು ಸ್ಮರಿಸಿದರು. ಮಹಿಳಾ ಶಿಕ್ಷಣಕ್ಕೆ ಉತ್ತೇಜನ, ಬಾಲ್ಯ ವಿವಾಹ ನಿಷೇಧ, ವಿಧವಾ ಮರುವಿವಾಹಕ್ಕೆ ಪ್ರೋತ್ಸಾಹ ಹಾಗೂ ಬಡ, ವಂಚಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅವರು ಕೈಗೊಂಡ ಐತಿಹಾಸಿಕ ಕ್ರಮಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದರು.
ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಅವರು, ಛತ್ರಪತಿ ಶಾಹೂಜಿ ಮಹಾರಾಜರ ದೂರದೃಷ್ಟಿಯ ಚಿಂತನೆ ಹಾಗೂ ಜನಕಲ್ಯಾಣಕಾರಿ ಕಾರ್ಯಗಳು ಮುಂದಿನ ಪೀಳಿಗೆಗಳಿಗೂ ಸದಾ ಸ್ಫೂರ್ತಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.