
ನವದೆಹಲಿ, 19 ಜೂನ್ (ಹಿ.ಸ.) :
ಆ್ಯಂಕರ್ : ಜ್ಞಾನ, ವಿವೇಕ ಮತ್ತು ದೂರದೃಷ್ಟಿ ಸೇರಿದಂತೆ ಕೆಲವು ಮಹತ್ವದ ಗುಣಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಭದ್ರ ಅಡಿಪಾಯವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಎಷ್ಟೇ ಕಠಿಣ ಸವಾಲುಗಳು ಎದುರಾದರೂ ಅವನ್ನು ಸಮರ್ಥವಾಗಿ ಎದುರಿಸಿ ಅಂತಿಮವಾಗಿ ವಿಜಯಶಾಲಿಯಾಗಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂಸ್ಕೃತದ ಒಂದು ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ವ್ಯಕ್ತಿತ್ವ ವಿಕಸನ ಮತ್ತು ಯಶಸ್ಸಿನ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ.
ಅವರು ಹಂಚಿಕೊಂಡ ಸುಭಾಷಿತ ಹೀಗಿದೆ :
“ಶಾಸ್ತ್ರೇ ಪ್ರತಿಷ್ಠಾ ಸಹಜಶ್ಚ ಬೋಧಃ ಪ್ರಾಗಲ್ಭ್ಯಮಭ್ಯಸ್ತಗುಣಾ ಚ ವಾಣಿ।
ಕಾಲಾನು್ರೋಧಃ ಪ್ರತಿಭಾನವತ್ವಮೇತೇ ಗುಣಾಃ ಕಾಮದುಘಾಃ ಕ್ರಿಯಾಸು॥”
ಈ ಸುಭಾಷಿತದ ಅರ್ಥವನ್ನು ವಿವರಿಸಿದ ಪ್ರಧಾನಿ, ಯಾವುದೇ ವಿಷಯದ ಕುರಿತು ಪ್ರಾಮಾಣಿಕ ಜ್ಞಾನ, ಸಹಜ ವಿವೇಕ, ನಿರ್ಭಯ ಆತ್ಮವಿಶ್ವಾಸ, ನಿರಂತರ ಅಭ್ಯಾಸದಿಂದ ರೂಪುಗೊಂಡ ಪರಿಣಾಮಕಾರಿ ವಾಗ್ಮಿತ್ವ, ಕಾಲದ ಅಗತ್ಯವನ್ನು ಗುರುತಿಸುವ ದೂರದೃಷ್ಟಿ ಹಾಗೂ ಹೊಸಹೊಸ ಆಲೋಚನೆಗಳನ್ನು ಮೂಡಿಸುವ ಸೃಜನಶೀಲತೆ – ಈ ಆರು ಗುಣಗಳು ಮಾನವನ ಪ್ರತಿಯೊಂದು ಕಾರ್ಯದಲ್ಲೂ ‘ಕಾಮಧೇನು’ವಿನಂತೆ ಫಲಪ್ರದವಾಗುತ್ತವೆ ಎಂದು ಹೇಳಿದ್ದಾರೆ.
ಈ ಗುಣಗಳು ವ್ಯಕ್ತಿಯನ್ನು ಗುರಿ ಸಾಧನೆಗೆ ಪ್ರೇರೇಪಿಸುವುದರ ಜೊತೆಗೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಲು ನೆರವಾಗುತ್ತವೆ ಎಂದು ಅವರು ಒತ್ತಿ ಹೇಳಿದ್ದಾರೆ. ಜ್ಞಾನ ಮತ್ತು ವಿವೇಕದೊಂದಿಗೆ ಕಾಲಾನುಸಾರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ವ್ಯಕ್ತಿಯ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.