
ಜಮ್ಮು, 17 ಜೂನ್ (ಹಿ.ಸ.) :
ಆ್ಯಂಕರ್ : ವಾರ್ಷಿಕ ಅಮರನಾಥ ಯಾತ್ರೆಯ ಸಿದ್ಧತೆಗಳು ಅಂತಿಮ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಜೂನ್ 20 ಮತ್ತು 21ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಭದ್ರತೆ ಹಾಗೂ ಇತರೆ ವ್ಯವಸ್ಥೆಗಳ ಪರಿಶೀಲನೆ ನಡೆಸಲಿದೆ.
ಅಧಿಕೃತ ಮೂಲಗಳ ಪ್ರಕಾರ, ಈ ನಿಯೋಗದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ) ಸೇರಿದಂತೆ ಪ್ರಮುಖ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮಹಾನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಗುಪ್ತಚರ ಇಲಾಖೆ ಮತ್ತು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳೂ ತಂಡದಲ್ಲಿರಲಿದ್ದಾರೆ.
ಜುಲೈ 3ರಿಂದ ಆರಂಭವಾಗಿ ಆಗಸ್ಟ್ 28ರಂದು ಶ್ರಾವಣ ಪೂರ್ಣಿಮೆ ಹಾಗೂ ರಕ್ಷಾ ಬಂಧನದಂದು ಸಮಾಪ್ತಿಗೊಳ್ಳಲಿರುವ 57 ದಿನಗಳ ಅಮರನಾಥ ಯಾತ್ರೆಗೆ ಕೈಗೊಳ್ಳಲಾಗಿರುವ ಭದ್ರತೆ ಮತ್ತು ಮೂಲಸೌಕರ್ಯ ಸಿದ್ಧತೆಗಳನ್ನು ತಂಡ ಪರಿಶೀಲಿಸಲಿದೆ.
ಯಾತ್ರೆಗೆ ಅಗತ್ಯವಿರುವ ಭದ್ರತಾ ಪಡೆಗಳಲ್ಲಿ ಈಗಾಗಲೇ ಸುಮಾರು ಶೇಕಡಾ 90ರಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಉಳಿದ ಪಡೆಗಳು ಜೂನ್ 20ರೊಳಗೆ ತಮ್ಮ ಕರ್ತವ್ಯ ಸ್ಥಳಗಳಿಗೆ ತಲುಪಲಿವೆ. ಯಾತ್ರೆಯ ಭದ್ರತೆಗಾಗಿ 670 ಅರೆಸೇನಾ ಪಡೆ ಕಂಪನಿಗಳ ನಿಯೋಜನೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ. ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದ್ದು, ಬಹುಹಂತದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.
ಪ್ರಸ್ತುತ ಶ್ರೀನಗರ ನಗರ ಸೇರಿದಂತೆ ಅನಂತನಾಗ್ ಮತ್ತು ಗಂದರ್ಬಲ್ ಮಾರ್ಗಗಳಲ್ಲಿ ವ್ಯಾಪಕ ಭದ್ರತಾ ತಾಲೀಮು ನಡೆಯುತ್ತಿದೆ. ಶ್ರೀನಗರದ ಹೋಟೆಲ್ಗಳು ಹಾಗೂ ವ್ಯಾಪಾರ ಮಳಿಗೆಗಳಲ್ಲಿ ತಪಾಸಣೆ ಕಾರ್ಯ ನಡೆಸಲಾಗುತ್ತಿದ್ದು, ನಗರ ಪ್ರವೇಶಿಸುವ ಮತ್ತು ನಿರ್ಗಮಿಸುವ ಪ್ರತಿಯೊಬ್ಬರನ್ನೂ ಪರಿಶೀಲಿಸಲಾಗುತ್ತಿದೆ. ಯಾತ್ರೆಯ ಸಿದ್ಧತೆಗಳ ಕುರಿತು ಅಧಿಕಾರಿಗಳು ನಿರಂತರವಾಗಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದಾರೆ.
ಈ ವರ್ಷ ಯಾತ್ರಿಕರ ನೋಂದಣಿ ಪ್ರಮಾಣ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮತ್ತು ಭದ್ರತಾ ಸಂಸ್ಥೆಗಳು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಯಾವುದೇ ಭದ್ರತಾ ಬೆದರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಹಾಗೂ ಅಮರನಾಥ ಯಾತ್ರೆಯನ್ನು ಶಾಂತಿಯುತ, ಸುರಕ್ಷಿತ ಮತ್ತು ಯಾವುದೇ ಅಹಿತಕರ ಘಟನೆಗಳಿಲ್ಲದೆ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಜಮ್ಮು-ಕಾಶ್ಮೀರದ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.