
ನವದೆಹಲಿ, 12 ಜೂನ್ (ಹಿ.ಸ.) :
ಆ್ಯಂಕರ್ : ಓಮಾನ್ ಕರಾವಳಿಯ ಸಮೀಪ ಪಲಾವು ಧ್ವಜ ಹೊತ್ತಿದ್ದ ತೈಲ ಟ್ಯಾಂಕರ್ ಎಂಟಿ ಸೆಟೆಬೆಲ್ಲೋ ಮೇಲೆ ನಡೆದ ಕ್ಷಿಪಣಿ ದಾಳಿಯ ನಂತರ ಭಾರತೀಯ ನಾವಿಕರು ಹಾಗೂ ಅವರ ಕುಟುಂಬಗಳಿಗೆ ತುರ್ತು ನೆರವು ಒದಗಿಸಲು ಕೇಂದ್ರ ಸರ್ಕಾರ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವಿಶೇಷ ಸಹಾಯವಾಣಿ ಸಂಖ್ಯೆಗಳನ್ನ ಪ್ರಕಟಿಸಿದೆ.
ಕೇಂದ್ರ ಬಂದರು, ಹಡಗುಸಾಗಣೆ ಮತ್ತು ಜಲಮಾರ್ಗ ಸಚಿವಾಲಯವು ಈ ಸಂಬಂಧ ಮಾಹಿತಿ ನೀಡಿದ್ದು, ಸಂಕಷ್ಟದಲ್ಲಿರುವ ನಾವಿಕರು ಮತ್ತು ಅವರ ಕುಟುಂಬಗಳಿಗೆ ತಕ್ಷಣದ ನೆರವು ಹಾಗೂ ಮಾಹಿತಿ ಒದಗಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದೆ.
ಸಹಾಯವಾಣಿ ಸಂಖ್ಯೆಗಳು
ವಾಟ್ಸ್ಆಪ್ ಕರೆ : +91 8657549760
ಪರ್ಯಾಯ ಸಂಪರ್ಕ ಸಂಖ್ಯೆ: +91 2222613606
ಪರ್ಯಾಯ ಸಂಪರ್ಕ ಸಂಖ್ಯೆ: +91 8657549752
ದೂರು ಪರಿಹಾರ ಟೋಲ್-ಫ್ರೀ ಸಂಖ್ಯೆ (ಭಾರತ): 1800-889-7768
ಅಂತಾರಾಷ್ಟ್ರೀಯ ಟೋಲ್-ಫ್ರೀ ಸಂಖ್ಯೆ: +1-888-988-0256
ದೂರು ಪರಿಹಾರ ವಾಟ್ಸ್ಆಪ್ ಕರೆ ಸಂಖ್ಯೆ: +91 8655856830
ಸಚಿವಾಲಯವು ಹಡಗುಸಾಗಣೆ ಮಹಾನಿರ್ದೇಶನಾಲಯ (ಡಿಜಿಎಸ್) ಮೂಲಕ ಹೋರ್ಮುಜ್ ಜಲಸಂಧಿ, ಓಮಾನ್ ಕೊಲ್ಲಿ ಹಾಗೂ ಸುತ್ತಮುತ್ತಲಿನ ಸೂಕ್ಷ್ಮ ಸಮುದ್ರ ಪ್ರದೇಶಗಳ ಚಟುವಟಿಕೆಗಳ ಮೇಲೆ 24 ಗಂಟೆಗಳ ನಿರಂತರ ನಿಗಾವಹಿಸುತ್ತಿದೆ.
ದಾಳಿಯಲ್ಲಿ ಮೂವರು ಭಾರತೀಯ ನಾವಿಕರ ದುರ್ಮರಣ
ಜೂನ್ 10ರಂದು ಓಮಾನ್ನ ಸೋಹರ್ ಬಂದರಿನಿಂದ ಸುಮಾರು 20 ನಾಟಿಕಲ್ ಮೈಲುಗಳಷ್ಟು ಈಶಾನ್ಯ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಮಧ್ಯಮ ಶ್ರೇಣಿಯ ತೈಲ ಟ್ಯಾಂಕರ್ ಎಂಟಿ ಸೆಟೆಬೆಲ್ಲೋ ಮೇಲೆ ಕ್ಷಿಪಣಿ ದಾಳಿ ನಡೆದಿತ್ತು. ಹಡಗಿನಲ್ಲಿ ಒಟ್ಟು 28 ಸಿಬ್ಬಂದಿ ಸದಸ್ಯರಿದ್ದು, ಅವರಲ್ಲಿ 24 ಮಂದಿ ಭಾರತೀಯರಾಗಿದ್ದರು.
ಈ ದುರ್ಘಟನೆಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದು, ಉಳಿದ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚನೆ
ಸಂಘರ್ಷ ಪೀಡಿತ ಸಮುದ್ರ ಪ್ರದೇಶಗಳಲ್ಲಿ ಸಂಚರಿಸುವ ಭಾರತೀಯ ಹಾಗೂ ವಿದೇಶಿ ಧ್ವಜದ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ನಾವಿಕರು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಡಿಜಿಎಸ್ ಸೂಚನೆ ನೀಡಿದೆ.
ಇದೇ ವೇಳೆ ಹಡಗು ನಿರ್ವಾಹಕರು ಹಾಗೂ ಶಿಪ್ಪಿಂಗ್ ಕಂಪನಿಗಳು ಸಮುದ್ರ ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸಲಹೆ ನೀಡಿದೆ. ಕೇಂದ್ರ ಸರ್ಕಾರ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿ ಅಥವಾ ಅಹಿತಕರ ಘಟನೆ ಸಂಭವಿಸಿದರೆ ತಕ್ಷಣವೇ ಹಡಗುಸಾಗಣೆ ಮಹಾನಿರ್ದೇಶನಾಲಯಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.
ನಾವಿಕರ ಸುರಕ್ಷತೆಗೆ ಸರ್ಕಾರ ಬದ್ಧ
ಭೌಗೋಳಿಕ-ರಾಜಕೀಯ ಅನಿಶ್ಚಿತತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಭಾರತ ಸರ್ಕಾರ ದೇಶದ ನಾವಿಕರು ಹಾಗೂ ಅವರ ಕುಟುಂಬಗಳೊಂದಿಗೆ ದೃಢವಾಗಿ ನಿಂತಿದ್ದು, ಅವರ ಸುರಕ್ಷತೆ, ಕಲ್ಯಾಣ ಮತ್ತು ಕ್ಷೇಮವನ್ನು ಖಚಿತಪಡಿಸಲು ಸಂಪೂರ್ಣ ಬದ್ಧವಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.