


ಕೊಪ್ಪಳ, 11 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಿಳಾ ಪರ ಯೋಜನೆಗಳನ್ನು ತಲುಪಿಸುವ ಜೊತೆಗೆ ಅವುಗಳ ಬಗ್ಗೆ ಪ್ರಚಾರ ಮಾಡಿ ಮಹಿಳಾ ಕಾಂಗ್ರೆಸ್ ಬಲವರ್ಧನೆ ಕಡೆಗೆ ಹೆಚ್ಚಿನ ಗಮನಹರಿಸಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಅವರು ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಕಾಂಗ್ರೆಸ್ ಕಾರ್ಯಕರಿ ಸಭೆಯನ್ನು ನಡೆಸಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಸಬಲೀಕರಣ ಮಾಡಿದ ಹಾಗೆ ದೌರ್ಜನ್ಯ ಹಾಗೂ ಸಂಕಷ್ಟಕ್ಕೊಳಗಾಗುವ ಮಹಿಳೆಯರಿಗೆ ತುರ್ತು ಸಹಾಯ ಒದಗಿಸಲು ಅಕ್ಕ ಪಡೆ ರಚಿಸಲಾಗಿದೆ, ಉಚಿತ ಬಸ್ ವ್ಯವಸ್ಥೆ ಶಕ್ತಿ ಸೇರಿದಂತೆ ಅನೇಕ ಯೋಜನೆಗಳನ್ನು ತಂದಿರುವ ಕಾಂಗ್ರೆಸ್ ಸರಕಾಋದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು, ಕೇಂದ್ರ ಬಿಜೆಪಿ ಸರಕಾರದ ವೈಫಲ್ಯ ಮತ್ತು ಜನವಿರೋಧಿ ನೀತಿಗಳನ್ನು ಮಹಿಳೆಯರಿಗೆ ತಿಳಿಸಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕೈ ಅಭ್ಯರ್ಥಿಗಳು ಗೆಲ್ಲುವ ಹಾಗೆ ಮಾಡಬೇಕು ಎಂದರು.
ಪ್ರತಿ ಮಹಿಳಾ ಬ್ಲಾಕ್ ಸಮಿತಿಗಳು ಇಡಬೇಕಾದ ದಾಖಲೆಗಳು, ಪುಸ್ತಕಗಳು ಮತ್ತು ಮಾಧ್ಯಮ ಹೇಳಿಕೆಗಳು, ವರದಿಗಳು ಹಾಗೂ ಛಾಯಾಚಿತ್ರಗಳ ದಾಖಲೆಗಳ ಕುರಿತು ಮಾಹಿತಿ ನೀಡಿದರು. ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದ ಮಹಿಳಾ ಕಾಂಗ್ರೆಸ್ ತರಬೇತಿ ಶಿಬಿರಗಳನ್ನು ನಡೆಸುವದು ಹಾಗೂ ತಮ್ಮ ತಮ್ಮ ಕ್ಷೇತ್ರದ ಶಾಸಕರು ಮಹಿಳಾ ಕಾಂಗ್ರೆಸ್ಗೆ ಬೆಂಬಲ ಮತ್ತು ಸಹಕಾರ ನೀಡುವಂತೆ ಮನವಿ ಮಾಡಿ ಪತ್ರ ಬರೆಯುವದಾಗಿ ಹೇಳಿದರು.
ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ಶೈಲಜಾ ಹಿರೇಮಠ ಅವರು, ಮಹಿಳಾ ಕಾಂಗ್ರೆಸ್ಗೆ ಡಿಸಿಸಿ ಅವರು ಹೆಚ್ಚಿನ ಪ್ರಾಧಾನ್ಯತೆ ಮತ್ತು ಸಹಕಾರ ನೀಡುವದು ಜೊತೆಗೆ ಸಮಾನ ಅವಕಾಶ ನೀಡುವಂತೆ ಒತ್ತಾಯಿಸಬೇಕಿದೆ, ಪ್ರಸ್ತುತ ಜಾರಿಯಾಗಿರುವ ಎಸ್.ಐ.ಆರ್. ಕುರಿತು ಮಾಹಿತಿ ನೀಡಿದ ಅವರು, ಯಾವುದೇ ಕಾರಣಕ್ಕೂ ಎಸ್.ಐ.ಆರ್. ಪ್ರಕ್ರಿಯೆಯಿಂದ ದೂರ ಸರಿಯದೇ ಯಾವುದೇ ಮತದಾರನ ಹಕ್ಕು ಹೋಗದಂತೆ ಎಚ್ಚರವಹಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರೇಷ್ಮಾ ಖಾಜಾವಲಿ ಕೊಪ್ಪಳ, ಗಂಗಮ್ಮ ಚಿಕೆನಕೊಪ್ಪ ಕೊಪ್ಪಳ, ಸೌಮ್ಯ ಕಂದಗಲ್ ಕಾರಟಗಿ, ಸಾವಿತ್ರಿ ಗೊಲ್ಲರ ಯಲಬುರ್ಗಾ, ಶಕುಂತಲಾ ಹಿರೇಮಠ ಕುಷ್ಟಗಿ, ಗೋವರ್ಧನಮ್ಮ ಕನಕಗಿರಿ, ಪ್ರಮಿಳಾ ಕನಕಗಿರಿ, ಮುಖಂಡರುಗಳಾದ ವಿಶಾಲಾಕ್ಷಿ ತಾವರಗೇರಾ, ಸುಮಂಗಲಾ ನಾಯಕ್, ಪದ್ಮಾ ಕಂಬಳಿ, ಗಂಗಮ್ಮ ಯಲಬುರ್ಗಾ, ಮಲ್ಲಮ್ಮ ಗೊಂದಿ, ಮಹಾದೇವಿ ಕಾರಟಗಿ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್