




ಕೊಪ್ಪಳ, 10 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಅವರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರನ್ನು 09-06-2026ರಂದು ಭೇಟಿ ಮಾಡಿ ಬಸಾಪುರ ಕೆರೆಯನ್ನು ಬಲ್ಡೋಟ ಅತಿಕ್ರಮಣದಿಂದ ಮುಕ್ತಗೊಳಿಸಿ, ಜನ ಜಾನುವಾರು ನೀರು ಕುಡಿಯಲು ಅನುಕೂಲ ಮಾಡಬೇಕೆಂದು ಆಗ್ರಹಿಸಲಾಗಿದೆ ಎಂದು ಬಸಾಪುರ ಗ್ರಾಮದ ಮೂಕಪ್ಪ ಮೇಸ್ತ್ರಿ ಇವರು ನಗರಸಭೆ ಆವರಣದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಡೆಸುತ್ತಿರುವ 223ನೇ ದಿನದ ಧರಣಿಯಲ್ಲಿ ಮಾತನಾಡಿದರು.
ಜನೆವರಿ 5, 2022ರಂದು ಹೈಕೋರ್ಟ್ ಆದೇಶ ಮಾಡಿ ಸಾರ್ವಜನಿಕರು ಮತ್ತು ಸುತ್ತಲ ಗ್ರಾಮಸ್ಥರಿಗೆ ಕೆರೆಯ ನೀರು ಬಳಸಲು ಅನುಮತಿ ನೀಡಿದೆ. ಪ್ರತಿವಾದಿ ಬಲ್ಡೋಟ ಕಂಪನಿ ಈ ಬಳಕೆಯನ್ನು ತಡೆಯಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕೆರೆ ಮಂಜೂರಿ ಷರತ್ತು ಉಲ್ಲಂಘಿಸಿರುವ ಕಂಪನಿ ಮೇಲೆ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಬೇಕೆಂದು ಕೋರಿದ್ದು ಹಾಸ್ಯಾಸ್ಪದವಾಗಿದೆ. ಜಿಲ್ಲಾಧಿಕಾರಿಗಳೇ ವಿಧಿಸಿದ ಷರತ್ತನ್ನು ಕಂಪನಿ ಉಲ್ಲಂಘಿಸಿದೆ ಎಂದು ಖಚಿತವಾದರೆ ನೇರವಾಗಿ ಕ್ರಮ ಕೈಗೊಳ್ಳಬೇಕಿತ್ತು. ಅದು ಬಿಟ್ಟು ಕಂದಾಯ ಕಾರ್ಯದರ್ಶಿಗಳ ನಿರ್ದೇಶನ ಕೋರುವ ಅಗತ್ಯವೇನಿತ್ತು ಎಂದು ಪ್ರಶ್ನೆ ಮಾಡಿದರು.
ಕೊಪ್ಪಳ ಹತ್ತಿರದ ಬಸಾಪುರ ಕೆರೆ ಸ.ನಂ. 143ರ 44.35 ಎಕರೆ ವಿಸ್ತೀರ್ಣದಲ್ಲಿ ಕೇವಲ 20 ಎಕರೆಯಲ್ಲಿ ನೀರು ನಿಂತಿದ್ದು ಉಳಿದ ಭಾಗವನ್ನು ಕೆರೆಯ ಮೂಲ ಸ್ವರೂಪ ಬದಲಿಸಿ ವಾಣಿಜ್ಯ ಚಟುವಟಿಕೆ ಮಾಡಲು ಬಲ್ಡೋಟ ಎಂ.ಎಸ್.ಪಿ.ಎಲ್ ಕಂಪನಿ ಆರಂಭ ಮಾಡಿದೆ. ಅಲ್ಲದೆ ಮಂಜೂರಾತಿಯ ಷರತ್ತುಗಳನ್ನು ಉಲ್ಲಂಘಿಸಿ ಕೆರೆಗೆ ಯಾರು ಪ್ರವೇಶಮಾಡದಂತೆ ಕಾಂಪೌಂಡ್ ನಿರ್ಮಾಣ ಮಾಡಿ ಕೆರೆ ದಂಡೆ ಮೇಲೆ ಬೃಹತ್ ಕಮಾನು ಸಹಿತ ದ್ವಾರಬಾಗಿಲು ಇಟ್ಟು ಗೇಟ್ ಅ. ವಡಿಸಿದ್ದಾರೆ.. ಇದರಿಂದ ಈ ಕೆರೆಯ ಸುತ್ತಮುತ್ತಲ ಗ್ರಾಮದ 15 ಸಾವಿರ ಹಸುಗಳು ಮತ್ತು 10,000ಕ್ಕಿಂತ ಹೆಚ್ಚು ಮೇಕೆ, ಕುರಿಗಳಿಗೆ ಕುಡಿಯುವ ನೀರಿನ ಅಭಾವದಿಂದ ತೊಂದರೆಯಾಗಿದೆ.
ಅಂದಿನ ತಹಶೀಲ್ದಾರರು, ಉಪವಿಭಾಗಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಇವರು 04.01.2024ರಂದು ಕೆರೆಯ ಸುತ್ತ ಬಲ್ಡೋಟ ಕಂಪನಿಗೆ ಕಾಂಪೌಂಡ್ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿರುತ್ತದೆ. ಈ ಉಲ್ಲಂಘನೆ ಮೇಲೆ ವಿಶೇಷ ತನಿಖೆ ನಡೆಸಿ ಈ ಆಧಿಕಾರಿಗಳ ಮೇಲೆ ಕ್ರಮ ಕೈಗೊಂಡು ತಕ್ಷಣದಿಂದಲೇ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಾಂಪೌಂಡ್ ತೆರವುಗೊಳಿಸಿ ಸಾರ್ವಜನಿಕರು ಕೆರೆ ನೀರು ಬಳಸಲು ಅವಕಾಶ ಮಾಡಬೇಕೆಂದು ಆಗ್ರಹಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘಕ್ಕೆ ಬಸಾಪುರ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಹೇಳುವ ಮೂಲಕ ಅಭಿನಂದನೆ ಸಲ್ಲಿಸಿದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಎನ್.ಎಂ. ಸವದತ್ತಿ ವಕೀಲರು, ಡಾ. ಬಸವರಾಜ ಪೂಜಾರ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಬಾವಿ, ಕಾಶಪ್ಪ ಚಲುವಾದಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶಿವರಾಜ ಚಲುವಾದಿ, ಶಿವಪ್ಪ ಹಲಗೇರಿ, ಶಿವಪ್ಪ ಜಲ್ಲಿ, ವಿಜಯಮಹಾಂತೇಶ ಹಟ್ಟಿ, ರಾಮಲಿಂಗಯ್ಯ ಶಾಸ್ತ್ರಿ, ಗವಿಸಿದ್ದಪ್ಪ ಚಿಕೇನಕೊಪ್ಪ, ಗಂಗಮ್ಮ ಕುರುಗೋಡು ಮುಂತಾದವರು ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್