ಪ್ರಾಥಮಿಕ ಆರೋಗ್ಯ ತಂಡಗಳಿಗೆ ಸಮಗ್ರ ತರಬೇತಿ ಕಾರ್ಯಕ್ರಮ ಆರಂಭ
ನವದೆಹಲಿ, 08 ಮೇ (ಹಿ.ಸ.) : ಆ್ಯಂಕರ್ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರು ಪ್ರಾಥಮಿಕ ಆರೋಗ್ಯ ರಕ್ಷಣಾ ತಂಡಗಳಿಗಾಗಿ ಸಮಗ್ರ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದರು. ಇತ್ತೀಚೆಗೆ ನಡೆದ 10ನೇ ರಾಷ್ಟ್ರೀಯ ಸಮ್ಮೇಳನದಲ್ಲಿ “ನಾವೀನ್ಯತೆ ಮತ್ತು ಒಳಗೊಳ್ಳುವಿಕೆ:
ಆಯುಷ್ಮಾನ ಅರೋಗ್ಯ ಕೇಂದ್ರ


ನವದೆಹಲಿ, 08 ಮೇ (ಹಿ.ಸ.) :

ಆ್ಯಂಕರ್ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರು ಪ್ರಾಥಮಿಕ ಆರೋಗ್ಯ ರಕ್ಷಣಾ ತಂಡಗಳಿಗಾಗಿ ಸಮಗ್ರ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದರು.

ಇತ್ತೀಚೆಗೆ ನಡೆದ 10ನೇ ರಾಷ್ಟ್ರೀಯ ಸಮ್ಮೇಳನದಲ್ಲಿ “ನಾವೀನ್ಯತೆ ಮತ್ತು ಒಳಗೊಳ್ಳುವಿಕೆ: ಭಾರತದ ಆರೋಗ್ಯ ಭವಿಷ್ಯ ರೂಪಿಸುವ ಉತ್ತಮ ಪದ್ಧತಿಗಳು” ಎಂಬ ವಿಷಯಾಧಾರಿತ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು.

ಆರೋಗ್ಯ ಸಚಿವಾಲಯದ ಪ್ರಕಾರ, ದೇಶದ ಮುಂಚೂಣಿ ಆರೋಗ್ಯ ಕಾರ್ಯಪಡೆಯನ್ನು ಆತ್ಮವಿಶ್ವಾಸವುಳ್ಳ, ಸಂವೇದನಾಶೀಲ ಹಾಗೂ ಗುಣಮಟ್ಟದ ಸೇವೆ ನೀಡಬಲ್ಲ ಸಿಬ್ಬಂದಿಯನ್ನಾಗಿ ರೂಪಿಸುವ ಉದ್ದೇಶದಿಂದ ವಿವಿಧ ತರಬೇತಿ ಕ್ರಮಗಳನ್ನು ಒಂದೇ ಸಾಮರ್ಥ್ಯಾಧಾರಿತ ವ್ಯವಸ್ಥೆಯಡಿ ತರಲಾಗಿದೆ. ಈ ಯೋಜನೆಯು ಗ್ರಾಮೀಣ ಹಾಗೂ ಕೊನೆಯ ಹಂತದ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಡ್ಡ, ಇದು ಕೇವಲ ತರಬೇತಿ ಪರಿಷ್ಕರಣೆ ಮಾತ್ರವಲ್ಲ, ದೇಶದ ಸಾರ್ವಜನಿಕ ಆರೋಗ್ಯ ಭವಿಷ್ಯಕ್ಕೆ ಮಾಡಲಾಗುತ್ತಿರುವ ಕಾರ್ಯತಂತ್ರದ ಹೂಡಿಕೆ ಎಂದು ಹೇಳಿದರು. ಇದರಿಂದ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚುವುದಲ್ಲದೆ, ಮೇಲ್ದರ್ಜೆಯ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಹಾಗೂ ಆರೋಗ್ಯ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಮತ್ತಷ್ಟು ಬಲಗೊಳ್ಳುತ್ತದೆ ಎಂದರು.

ಸಚಿವಾಲಯದ ಮಾಹಿತಿಯಂತೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಸ್ಥಾಪಿಸಲಾದ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ತಡೆಗಟ್ಟುವಿಕೆ, ಆರೋಗ್ಯ ಜಾಗೃತಿ ಹಾಗೂ ಚಿಕಿತ್ಸಾ ಸೇವೆಗಳ ಕೇಂದ್ರಗಳಾಗಿ ರೂಪಿಸಲಾಗಿದೆ. ಜನ ಆರೋಗ್ಯ ಸಮಿತಿಗಳು, ಮಹಿಳಾ ಆರೋಗ್ಯ ಸಮಿತಿಗಳು, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳು ಹಾಗೂ ಸಾರ್ವಜನಿಕ ಆರೋಗ್ಯ ಶಿಬಿರಗಳ ಮೂಲಕ ಸಮುದಾಯದ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಜವಾದ ಪ್ರಗತಿ ಜನಕೇಂದ್ರಿತವಾಗಿರಬೇಕು ಎಂದು ಹೇಳಿದರು. ವೈದ್ಯಕೀಯ ವಿಜ್ಞಾನದಲ್ಲಿ ಎಷ್ಟೇ ಸಾಧನೆಗಳಾದರೂ, ಅದರ ಲಾಭ ಸಮಾಜದ ಕೊನೆಯ ವ್ಯಕ್ತಿಗೂ ತಲುಪಬೇಕು ಎಂಬುದು ಸರ್ಕಾರದ ಧ್ಯೇಯ ಎಂದು ತಿಳಿಸಿದರು.

ಈ ತರಬೇತಿ ಕಾರ್ಯಕ್ರಮದ ಮೂಲಕ ಆರೋಗ್ಯ ಕಾರ್ಯಕರ್ತರಿಗೆ ರೋಗ ತಡೆಗಟ್ಟುವಿಕೆ, ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು, ಚಿಕಿತ್ಸೆ ನೀಡುವುದು ಹಾಗೂ ನಂತರದ ಆರೈಕೆವರೆಗಿನ ಸಂಪೂರ್ಣ ಸೇವೆಗಳನ್ನು ಸಮರ್ಥವಾಗಿ ಒದಗಿಸಲು ನೆರವಾಗಲಿದೆ ಎಂದು ಹೇಳಿದರು.

ಈ ಯೋಜನೆಯ ಎರಡು ಪ್ರಮುಖ ವೈಶಿಷ್ಟ್ಯಗಳನ್ನು ಸಚಿವಾಲಯ ಉಲ್ಲೇಖಿಸಿದೆ. ಮೊದಲನೆಯದಾಗಿ, ಸಮುದಾಯ ಆರೋಗ್ಯ ಕಾರ್ಯಪಡೆಯ ಸಾಮರ್ಥ್ಯವನ್ನು ಹೆಚ್ಚಿಸಿ ಉತ್ತಮ ಗುಣಮಟ್ಟದ ಸೇವೆ ಒದಗಿಸುವುದು. ಎರಡನೆಯದಾಗಿ, ಪ್ರಾಥಮಿಕ ಆರೋಗ್ಯ ಸೇವೆಯ ಬೆನ್ನೆಲುಬಾಗಿರುವ ಮಹಿಳಾ ಸಿಬ್ಬಂದಿಗೆ ಹೆಚ್ಚಿನ ಶಕ್ತಿ ಮತ್ತು ಅವಕಾಶ ಒದಗಿಸುವುದು.

ದೇಶದ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಸಹಾಯಕ ದಾದಿಯರು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಲ್ಲಿ ಶೇಕಡಾ 70 ಕ್ಕೂ ಹೆಚ್ಚು ಮಂದಿ ಮಹಿಳೆಯರಾಗಿದ್ದು, ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ಈ ಯೋಜನೆ ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಲಾಗಿದೆ.

ನಿರಂತರ ಕಲಿಕೆಯ ಭಾಗವಾಗಿ ಅಂಕೀಯ ತರಬೇತಿ ವೇದಿಕೆಯ ಮೂಲಕ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಆರೋಗ್ಯ ಕಾರ್ಯಪಡೆ ಭವಿಷ್ಯದ ಅಗತ್ಯಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಪಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande