
ನವದೆಹಲಿ, 22 ಮೇ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸುವ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, 2018ರಲ್ಲಿ ಎನ್ಟಿಎ ಸ್ಥಾಪನೆಯಾದ ಬಳಿಕದಿಂದ ಮೋದಿ ಸರ್ಕಾರ ಮತ್ತು ಅದರ ವ್ಯವಸ್ಥೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ಸತ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಎನ್ಟಿಎ ಮಹಾನಿರ್ದೇಶಕರು ಸಂಸದೀಯ ಸಮಿತಿಯ ಮುಂದೆ ನೀಟ್-ಯುಜಿ 2026 ಪರೀಕ್ಷೆ ಸೋರಿಕೆಯಾಗಿಲ್ಲ ಎಂದು ಹೇಳಿರುವುದು ಆಘಾತಕಾರಿ ಅಪ್ರಾಮಾಣಿಕತೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ. ನಿಜವಾದ ಪರೀಕ್ಷೆಯಲ್ಲಿ ಕೇಳಲಾದ ಹಲವು ಪ್ರಶ್ನೆಗಳನ್ನೊಳಗೊಂಡ ‘ಊಹೆ ಪ್ರಶ್ನೆಪತ್ರಿಕೆ’ ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿಗಳ ನಡುವೆ ಹರಿದಾಡುತ್ತಿತ್ತು. ಅದು ಸೋರಿಕೆ ಅಲ್ಲದಿದ್ದರೆ ಮತ್ತೇನು ಎಂದು ಅವರು ಪ್ರಶ್ನಿಸಿದ್ದಾರೆ.
ನೀಟ್-ಯುಜಿ 2024 ಪರೀಕ್ಷೆಯಲ್ಲೂ ನಡೆದ ಅಕ್ರಮಗಳನ್ನು ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸಿತ್ತು. ಆಗಲೇ ಸೂಕ್ತ ಕ್ರಮ ಕೈಗೊಂಡಿದ್ದರೆ 2026ರ ವಿವಾದ ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದಾರೆ. 2024ರಲ್ಲಿ ಅಕ್ರಮಗಳ ಕೇಂದ್ರಬಿಂದುವಾಗಿದ್ದ ರಾಜಸ್ಥಾನದ ಸಿಕಾರ್ ಸೇರಿದಂತೆ ಕೆಲವು ಪ್ರದೇಶಗಳು 2026ರ ವಿವಾದದಲ್ಲೂ ಮತ್ತೆ ಕಾಣಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ.
ಯುಜಿಸಿ-ನೆಟ್ 2024 ಪರೀಕ್ಷೆಯ ವಿಚಾರದಲ್ಲೂ ಸಿಬಿಐ ಯಾವುದೇ ಅಕ್ರಮಗಳಿಲ್ಲ ಎಂದು ಹೇಳಿ ಮುಕ್ತಾಯ ವರದಿ ಸಲ್ಲಿಸಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಪರೀಕ್ಷೆಯನ್ನು ಎನ್ಟಿಎ ಸ್ವತಃ ರದ್ದುಗೊಳಿಸಿದ್ದರೂ, ಸಿಬಿಐನ ನಡೆ ತನಿಖೆಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಹುಟ್ಟಿಸಿದೆ ಎಂದು ಟೀಕಿಸಿದ್ದಾರೆ.
ದೇಶದ ಲಕ್ಷಾಂತರ ಯುವಜನರಿಗೆ ಎನ್ಟಿಎ ಈಗ “ರಾಷ್ಟ್ರೀಯ ಆಘಾತ ಸಂಸ್ಥೆ”ಯಾಗಿ ಪರಿಣಮಿಸಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಸಿಬಿಎಸ್ಇ, ಎನ್ಸಿಇಆರ್ಟಿ ಹಾಗೂ ಶಿಕ್ಷಣ ಸಚಿವಾಲಯದ ಇತರೆ ಸಂಸ್ಥೆಗಳ ಕಾರ್ಯವೈಖರಿಯ ಮೇಲೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.