
ನವದೆಹಲಿ, 21 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮಾತೃಭೂಮಿಯ ಮಹತ್ವ, ಪರಾಕ್ರಮ ಮತ್ತು ಆಧ್ಯಾತ್ಮಿಕ ವೈಭವವನ್ನು ಕೊಂಡಾಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. ದೇಶದ ಪವಿತ್ರ ಭೂಮಿ ಸಾಧನೆ, ಶಕ್ತಿ ಮತ್ತು ಸರ್ವಜನ ಹಿತದ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಧಾನಿ ಮೋದಿ ಅವರು ಸಂಸ್ಕೃತದ ಸುಭಾಷಿತವೊಂದನ್ನು ಹಂಚಿಕೊಂಡು, ಭಾರತದ ಪೌರಾಣಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದರು.
“ಯಸ್ಯಾಂ ಪೂರ್ವೇ ಪೂರ್ವಜನಾ ವಿಚಕ್ರಿರೇ ಯಸ್ಯಾಂ ದೇವಾ ಅಸುರಾನಭ್ಯವರ್ತಯನ್ ।
ಗವಾಮಶ್ವಾನಾಂ ವಯಸಶ್ಚ ವಿಷ್ಠಾ ಭಗಂ ವರ್ಚಃ ಪೃಥಿವೀ ನೋ ದಧಾತು ।।”
ಎಂಬ ಸುಭಾಷಿತವನ್ನು ಉಲ್ಲೇಖಿಸಿದ ಅವರು, ಈ ಪವಿತ್ರ ಭೂಮಿಯಲ್ಲೇ ನಮ್ಮ ಪೂರ್ವಜರು ಮಹಾನ್ ಕಾರ್ಯಗಳನ್ನು ನೆರವೇರಿಸಿದ್ದಾರೆ ಎಂದು ಹೇಳಿದರು. ದೇವತೆಗಳು ಅಸುರರ ಮೇಲೆ ವಿಜಯ ಸಾಧಿಸಿದ ನೆಲವೇ ಈ ಭಾರತ ಭೂಮಿ ಎಂದು ಅವರು ಬಣ್ಣಿಸಿದರು.
ಈ ಸುಭಾಷಿತದ ಅರ್ಥವನ್ನು ವಿವರಿಸಿದ ಪ್ರಧಾನಿ ಮೋದಿ, ಗೋವುಗಳು, ಕುದುರೆಗಳು ಹಾಗೂ ಪಕ್ಷಿಗಳಂತಹ ಸಮಸ್ತ ಜೀವಜಾಲಕ್ಕೆ ಆಶ್ರಯವಾಗಿರುವ ಈ ಭೂಮಿ ನಮಗೆ ಐಶ್ವರ್ಯ, ತೇಜಸ್ಸು, ಭಾಗ್ಯ ಮತ್ತು ಸಮೃದ್ಧಿಯನ್ನು ನೀಡಲಿ ಎಂಬ ಪ್ರಾರ್ಥನೆ ಇದರಲ್ಲಿ ಅಡಕವಾಗಿದೆ ಎಂದು ತಿಳಿಸಿದರು.
ಭಾರತದ ಈ ಪುಣ್ಯಭೂಮಿ ಕೇವಲ ಆಧ್ಯಾತ್ಮಿಕ ಸಾಧನೆಯ ಕೇಂದ್ರವಾಗಿರದೇ, ಶೌರ್ಯ, ಶಕ್ತಿ ಮತ್ತು ಲೋಕಕಲ್ಯಾಣದ ಆಧಾರಭೂಮಿಯಾಗಿಯೂ ವಿಶ್ವದ ಗಮನ ಸೆಳೆದಿದೆ ಎಂದು ಪ್ರಧಾನಿ ಹೇಳಿದರು.
ಭಾರತದ ಮಹಾನ್ ಪರಂಪರೆ ಮತ್ತು ಪ್ರಾಚೀನ ಸಂಸ್ಕೃತಿ ಎಲ್ಲರ ಬದುಕನ್ನೂ ಸದಾ ಸುಖ-ಸಮೃದ್ಧಿಯಿಂದ ಕಂಗೊಳಿಸಲಿ ಎಂದು ಪ್ರಧಾನಿ ಮೋದಿ ಆಶಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.