


ಬಳ್ಳಾರಿ, 06 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ 2027ರ ಜನಗಣತಿಯ ಮೊದಲ ಹಂತವಾದ ಮನೆಪಟ್ಟಿ ಮತ್ತು ಮನೆ ಗಣತಿ ಪ್ರಕ್ರಿಯೆಗೆ ಪೂರ್ವಭಾವಿಯಾಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಡಿಹೆಚ್ಓ ಸಭಾಂಗಣದಲ್ಲಿ ‘ಸ್ವಯಂ-ಗಣತಿ' ಕುರಿತ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜೆ.ಮಂಜುನಾಥ್ ಅವರು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಈ ಬಾರಿ ಜನಗಣತಿಯಲ್ಲಿ ಡಿಜಿಟಲ್ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸಾರ್ವಜನಿಕರು ತಾವಾಗಿಯೇ ಮಾಹಿತಿಯನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ 15 ರವರೆಗೆ (15 ದಿನಗಳು) ಈ ಸೌಲಭ್ಯ ಲಭ್ಯವಿದೆ ಎಂದು ತಿಳಿಸಿದರು.
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಮೊಬೈಲ್ ಓಟಿಪಿ ಮೂಲಕ ಲಾಗಿನ್ ಆಗಿ ತಮ್ಮ ಕುಟುಂಬದ ವಿವರಗಳನ್ನು ಸಲ್ಲಿಸಬಹುದಾಗಿದೆ. ವಿವರ ಸಲ್ಲಿಕೆಯ ನಂತರ ಸಿಗುವ ‘ಸೆಲ್ಫ್ ಎನ್ಯುಮರೇಶನ್ ಐಡಿ' (ಎಸ್ಇ ಐಡಿ) ಅನ್ನು ಗಣತಿದಾರರು ಮನೆಗೆ ಬಂದಾಗ ತೋರಿಸುವುದು ಕಡ್ಡಾಯವಾಗಿದೆ. ಹಾಗಾಗಿ ಈ ಕುರಿತು ಸಾರ್ವಜನಿಕರಿಗೆ ಹೆಚ್ಚು ಮಾಹಿತಿ ನೀಡುತ್ತಾ, ಡಿಜಿಟಲ್ ಮ್ಯಾಪಿಂಗ್ ಮತ್ತು ಆನ್ಲೈನ್ ಡೇಟಾ ಸಂಗ್ರಹಣೆಯ ಸೂಕ್ಷö್ಮತೆಗಳನ್ನು ವಿವರಿಸಿದರು.
ತಹಶೀಲ್ದಾರ್ ಕಚೇರಿ ಅಧಿಕಾರಿಯ ಪರಶುರಾಮ್ ಅವರು ಮಾತನಾಡಿ, ಸ್ವಯಂ-ಗಣತಿ ಮಾಡಿಕೊಳ್ಳಲು ಸಾಧ್ಯವಾಗದವರಿಗಾಗಿ ಗಣತಿದಾರರು ಎಂದಿನAತೆ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಇದು ಕೇವಲ ಒಂದು ಹೆಚ್ಚುವರಿ ಮತ್ತು ಸುಲಭವಾದ ಡಿಜಿಟಲ್ ಆಯ್ಕೆಯಾಗಿದೆ ಎಂದು ತಿಳಿಸಿದರು.
ಸ್ವಯಂ ಗಣತಿ ಪ್ರಕ್ರಿಯೆಯಿಂದ ಸಮಯದ ಉಳಿತಾಯವಾಗುವುದಲ್ಲದೆ, ಅತ್ಯಂತ ನಿಖರವಾದ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರು ನೀಡುವ ಎಲ್ಲಾ ಮಾಹಿತಿಗಳು ಸಂಪೂರ್ಣ ಗೌಪ್ಯವಾಗಿರುತ್ತವೆ. ಈ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ. ಇಂದ್ರಾಣಿ, ಜಿಲ್ಲಾ ಅಸಾಂಕ್ರಾಮಿಕ ರೋಗ ಘಟಕದ ಅಧಿಕಾರಿ ಡಾ. ವೀರೇಂದ್ರ ಕುಮಾರ್, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಖುರ್ಶಿದ್ ಬೇಗಮ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ- ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್