ಎಸ್.ಟಿ.ಆರ್.ಆರ್ - ಹೊಸೂರು ಕುಪ್ಪಂ ಸಂಪರ್ಕಿಸುವ ಚತುಷ್ಪಥ ಹೆದ್ದಾರಿ ಯೋಜನೆಗೆ ಸಿದ್ಧತೆ
ಎಸ್.ಟಿ.ಆರ್.ಆರ್ - ಹೊಸೂರು ಕುಪ್ಪಂ ಸಂಪರ್ಕಿಸುವ ಚತುಷ್ಪಥ ಹೆದ್ದಾರಿ ಯೋಜನೆಗೆ ಸಿದ್ಧತೆ
ಕುಪ್ಪಂ ಗ್ರೀನ್ ಫೀಲ್ಡ್ ಹೆದ್ದಾರಿ ಯೋಜನೆಯ ಕುರಿತು ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದರು.


ಕೋಲಾರ, ೦೬ ಏಪ್ರಿಲ್ (ಹಿ.ಸ) :

ಆ್ಯಂಕರ್ : ಬೆಂಗಳೂರು - ಹೊಸೂರು - ಕೃಷ್ಣಗಿರಿ ಹೆದ್ದಾರಿಯಲ್ಲಿನ ಅತಿಯಾದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ದಕ್ಷಿಣದ ಜಿಲ್ಲೆಗಳ ನಡುವೆ ಸುಗಮ ಸಂಚಾರ ಕಲ್ಪಿಸಲು ಎನ್.ಹೆಚ್.ಎ.ಐ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಎಸ್.ಟಿ.ಆರ್.ಆರ್ - ಕುಪ್ಪಂ ಗ್ರೀನ್ ಫೀಲ್ಡ್ ಹೆದ್ದಾರಿ ಯೋಜನೆಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹತ್ವದ ಸಮಾಲೋಚನಾ ಸಭೆ ನಡೆಯಿತು.

ಜಿಲ್ಲಾಧಿಕಾರಿಗಳಾದ ಡಾ. ಎಂ. ಆರ್. ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಎನ್.ಹೆಚ್.ಎ.ಐ ಅಧಿಕಾರಿಗಳು ಯೋಜನೆಯ ನೀಲಿನಕ್ಷೆ ಮತ್ತು ಉದ್ದೇಶಿತ ಮಾರ್ಗಗಳ ಬಗ್ಗೆ ವಿವರವಾದ ಪ್ರಾತ್ಯಕ್ಷಿಕೆ ನೀಡಿದರು.

ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಬೆಂಗಳೂರು ಸುತ್ತಮುತ್ತಲಿನ ಉಪನಗರ ವರ್ತುಲ ರಸ್ತೆಯನ್ನು ಆಂಧ್ರಪ್ರದೇಶದ ಕುಪ್ಪಂ ಬಳಿಯ ಎನ್.ಹೆಚ್-೪೨ ಕ್ಕೆ ಈ ಹೊಸ ಹೆದ್ದಾರಿ ಸಂಪರ್ಕಿಸಲಿದೆ. ಒಟ್ಟು ೫೩ ಕಿ.ಮೀ ಉದ್ದದ ಈ ಯೋಜನೆಯಲ್ಲಿ ಸುಮಾರು ೩೫ ಕಿ.ಮೀ ರಸ್ತೆ ಕೋಲಾರ ಜಿಲ್ಲೆಯ ಮೂಲಕ ಹಾದುಹೋಗಲಿದೆ. ಇದು ಜಿಲ್ಲೆಯ ಬಂಗಾರಪೇಟೆ ಮತ್ತು ಮಾಲೂರು ತಾಲೂಕುಗಳ ಪ್ರಮುಖ ಭಾಗಗಳನ್ನು ಒಳಗೊಳ್ಳಲಿದೆ.

ಹೊಸೂರು ಮತ್ತು ಕೃಷ್ಣಗಿರಿ ಮೂಲಕ ಸಾಗುವ ವಾಹನಗಳು ಬೆಂಗಳೂರು ನಗರವನ್ನು ಪ್ರವೇಶಿಸದೆಯೇ ಈ ಹೊಸ ಮಾರ್ಗದ ಮೂಲಕ ಸುಲಭವಾಗಿ ಸಂಚರಿಸಬಹುದಾಗಿದೆ. ಇದರಿಂದ ಸಮಯ ಮತ್ತು ಇಂಧನ ಎರಡೂ ಉಳಿತಾಯವಾಗಲಿದೆ. ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು, ಯೋಜನೆಯ ಅನುಷ್ಠಾನದ ವೇಳೆ ಸ್ಥಳೀಯ ರೈತರಿಗೆ ಮತ್ತು ಅರಣ್ಯ ಪ್ರದೇಶಕ್ಕೆ ಧಕ್ಕೆ ಬರದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ಹೆದ್ದಾರಿ ನಿರ್ಮಾಣದಿಂದ ಜಮೀನು ಕಳೆದುಕೊಳ್ಳುವ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು. ಅಲ್ಲದೆ, ರಸ್ತೆಯ ಎರಡೂ ಬದಿಗಳಲ್ಲಿ ರೈತರ ಓಡಾಟಕ್ಕೆ ಅನುಕೂಲವಾಗುವಂತೆ ಸರ್ವಿಸ್ ರಸ್ತೆಗಳನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಸೇರಿದಂತೆ ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ರಸ್ತೆ ಹಾದುಹೋಗುವಾಗ ಕನಿಷ್ಠ ಪ್ರಮಾಣದ ಅರಣ್ಯ ನಾಶವಾಗುವಂತೆ ನೋಡಿಕೊಳ್ಳಲು ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಿದರು.

ಈ ಹೆದ್ದಾರಿಯು ಜಿಲ್ಲೆಯ ಮಾಸ್ತಿ, ಬಲಮಂದೆ ಹಾಗೂ ಬಿಇಎಂಎಲ್ ಕೈಗಾರಿಕಾ ಪ್ರದೇಶಗಳಿಗೆ ಹತ್ತಿರವಾಗಿ ಹಾದುಹೋಗುವುದರಿಂದ, ಭವಿಷ್ಯದಲ್ಲಿ ಕೋಲಾರ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ವೇಗ ಸಿಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.ಯೋಜನೆಯ ಅಂತಿಮ ರೂಪರೇಷೆ ಸಿದ್ಧಪಡಿಸುವ ಮುನ್ನ ಅರಣ್ಯ, ಕಂದಾಯ, ಕೆಪಿಟಿಸಿಎಲ್ ಸೇರಿದಂತೆ ಎಲ್ಲಾ ಸಂಬ0ಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಮನ್ವಯ ಸಭೆ ನಡೆಸಿ, ಯಾವುದೇ ತಾಂತ್ರಿಕ ಅಡಚಣೆಗಳಿಲ್ಲದಂತೆ ಕ್ರಮ ವಹಿಸಲು ಭಾರತದ ರಾಷ್ಟಿಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಕೆಜಿಎಫ್ ಪೊಲೀಸ್ ವರಿಷ್ಟಾಧಿಕಾರಿ ಶಿವಾಂಷು ರಜಪೂತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಎನ್.ಹೆಚ್.ಎ.ಐ ಅಧಿಕ್ಷಕ ಅಭಿಯಂತರರು ಮತ್ತು ಹಿರಿಯ ಅಧಿಕಾರಿಗಳು, ಸಾರಿಗೆ ಅಧಿಕಾರಿ ವೇಣುಗೋಪಾಲ್, ಕೆ.ಎಸ್.ಆರ್ಟಿ ಸಿ ಉಪವಿಭಾಗಿಯ ನಿಯಂತ್ರಣಧಿಕಾರಿ ಶ್ರೀನಾಥ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande