
ದಾವಣಗೆರೆ, 06 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ, ತುಷ್ಟೀಕರಣ, ಭ್ರಷ್ಟಾಚಾರದ ಪರಾಕಾಷ್ಠೆ ಎಲ್ಲೆ ಮೀರಿದೆ. 'ಅಲ್ಲಿ ಗಾಂಧಿ ಕುಟುಂಬ, ಇಲ್ಲಿ ಶಾಮನೂರು ಕುಟುಂಬದ ಕುಡಿಗಳನ್ನು ಕಣಕ್ಕಿಳಿಸಿ ಕುಟುಂಬ ರಾಜಕಾರಣವನ್ನು ಪೋಷಿಸಿಕೊಳ್ಳುತ್ತಿವೆ' ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.
ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಹೈಕಮಾಂಡ್ ಗಾಂಧಿ ಕುಟುಂಬದ ಕೈಯಲ್ಲಿದ್ದರೆ, ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಕೈಯಲ್ಲಿದೆ. ಪಕ್ಷಕ್ಕಿಂತ ಕುಟುಂಬ ರಾಜಕಾರಣ ಹಾಸುಹೊಕ್ಕಾಗಿದೆ. ಭವಿಷ್ಯದಲ್ಲೂ ನಿಷ್ಠಾವಂತ ಕಾರ್ಯಕರ್ತರಿಗಿಂತ ಕುಟುಂಬದ ಕುಡಿಗಳನ್ನೇ ಮುನ್ನಲೆಗೆ ತರುತ್ತಿದ್ದಾರೆಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಮೂವರೂ ಸಂಸದರು. ಜತೆಗೆ ಪ್ರಿಯಾಂಕಾ ವಾದ್ರಾ ಅವರ ಮಗನಿಗೂ ಒಂದು ಕ್ಷೇತ್ರ ಹುಡುಕುತ್ತಿದ್ದಾರೆ. ಅಕ್ಕಪಕ್ಕದ ಕ್ಷೇತ್ರದಲ್ಲಿ ನಿಲ್ಲಿಸಲು ತಯಾರಿ ನಡೆದಿದೆ ಎಂದರು ಜೋಶಿ.
ದಾವಣಗೆರೆಯಲ್ಲೂ ಕಾಂಗ್ರೆಸ್ ಹೈಕಮಾಂಡ್ ಮಾದರಿ ರಾಜಕಾರಣ ನಡೆಯುತ್ತಿದೆ. ತಂದೆ-ಮಗ ಇಬ್ಬರೂ ಶಾಸಕರಿದ್ದರೆ, ಸೊಸೆ ಸಂಸದರು. ಇದೀಗ ತಂದೆ ಎಂಎಲ್ಎ ಮಂತ್ರಿ, ಪತ್ನಿ ಸಂಸದೆ, ಮಗ ಎಂಎಲ್ಎ ಅಭ್ಯರ್ಥಿ. ಮುಂದೆ ಮತ್ಯಾವುದಾದರೂ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಈ ಕುಟುಂಬದವರೇ ನಿಲ್ಲುತ್ತಾರೆ ಎಂದು ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ವಿಶ್ಲೇಷಿಸಿದರು.
ದಾವಣಗೆರೆಯಲ್ಲಿ ಕಾಂಗ್ರೆಸ್ ಗೆ ಶಾಮನೂರು ಕುಟುಂಬ ಬಿಟ್ಟರೆ ಬೇರೆ ಯಾರೂ 'ಸಮರ್ಥ'ರಿ ಲ್ಲವೇ? ಎಂದು ಪ್ರಶ್ನಿಸಿದ ಜೋಶಿ, ಇನ್ನೂ 40 ವರ್ಷ ಕುಟುಂಬ ರಾಜಕಾರಣವೇ ಮುಂದುವರಿದು, ಇಡೀ ದಾವಣಗೆರೆ ಕಬ್ಜಾ ಮಾಡಿಕೊಳ್ಳುತ್ತಾರೆ ಹುಷಾರಿ ಎಂದು ದಾವಣಗೆರೆ ಜನತೆಯನ್ನು ಎಚ್ಚರಿಸಿದರು.
ಕಾಂಗ್ರೆಸ್ ತುಷ್ಟೀಕರಣದ ಪರಾಕಾಷ್ಠೆ ದಾವಣಗೆರೆಯಲ್ಲೂ ಎಲ್ಲೆಮೀರಿದೆ. ಕಾರ್ತೀಕ ದೀಪ ಹಚ್ಚಬೇಕೆಂದು ಹೈಕೋರ್ಟ್ ನ್ಯಾಯಾಧೀಶರು ತೀರ್ಪಿತ್ತರೆ, ಅವರ ಮೇಲೆ ಕ್ರಮಕ್ಕಾಗಿ ಸಹಿ ಮಾಡಿದವರು ಇವರು. ದೇವಸ್ಥಾನದ ದೀಪ ಆರಿಸಿ ಮಸೀದಿ ದೀಪ ಬೆಳಗಲು ಹೊರಟರು. ಮಸೀದಿ ದೀಪ ಹಚ್ಚಿ. ಆದರೆ, ದೇವಸ್ಥಾನದ ದೀಪ ಆರಿಸೋದು ಯಾಕೆ? ಎಂದು ಪ್ರಶ್ನಿಸಿದ ಪ್ರಲ್ಹಾದ ಜೋಶಿ, ದಾವಣಗೆರೆ ಜನತೆ ಮಾತ್ರವಲ್ಲ, ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಸಹ ಇಂಥ ತುಷ್ಟೀಕರಣ, ಭ್ರಷ್ಟಾಚಾರ ಮತ್ತು ವಂಶವಾಹಿ ರಾಜಕಾರಣಕ್ಕೆ ಕೊನೆ ಹಾಡಬೇಕೆಂದು ಕರೆ ನೀಡಿದರು.
ದೇಶದ ಹಲವು ಕಡೆ ಚುನಾವಣೆ ನಡೆದಿದೆ. ಎಲ್ಲೂ ಕಾಂಗ್ರೆಸ್ ಇಲ್ಲ. ಎಲ್ಲೋ ಅಲ್ಲಲ್ಲಿ ಉಸಿರಾಡುತ್ತಿದ್ದಾರೆ ಅಷ್ಟೇ. ಅಸ್ಸಾಂ ಅಲ್ಲಿ ಉಚಿತಗಳ ಘೋಷಣೆ ಮಾಡಿದ್ದಾರೆ. ಆದರೆ ಅಲ್ಲಿವರೆಗೆ ಸೋಲು ಖಚಿತ. ಇನ್ನು ಕೇರಳದಲ್ಲಿ ಸ್ವಲ್ಪ ಉಸಿರಾಡುತ್ತಿದ್ದಾರೆ. ತಮಿಳುನಾಡಲ್ಲಿ ಆಡಳಿತ ನಡೆಸಿದ ಇವರು ಈಗ 21 ಸೀಟಿಗೆ ಸ್ಟಾಲಿನ್ ಕೈಹಿಡಿದು ಹೋಗುವ ದುಸ್ಥಿತಿ ತಲುಪಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷದವರು ಚುನಾವಣೆ ಬಂತೆಂದರೆ ಅಹಿಂದ ಅಹಿಂದ ಎನ್ನುತ್ತಾರೆ. ಆದರೆ, ಬಾಗಲಕೋಟೆಯಲ್ಲಿ ಮಾತ್ರ ಇವರಿಗೆ ಅಹಿಂದ ವರ್ಗ ಕಾಣಿಸಿತು. ಅದೇ ದಾವಣಗೆರೆಯಲ್ಲಿ ಅಹಿಂದದವರಿಗೆ ಗೋವಿಂದ ಎನ್ನುತ್ತಿದ್ದಾರೆ. ಇಲ್ಲಿವರೆಗೆ ಅಹಿಂದ ಲೆಕ್ಕವೇ ಇಲ್ಲ ಎಂದು ಜೋಶಿ ವಾಗ್ದಾಳಿ ನಡೆಸಿದರು.
ದಾವಣಗೆರೆ ಸಿದ್ದೇಶ್ವರ್ ಅವರ ಕಾಲದಲ್ಲಿ ಸ್ಮಾರ್ಟ್ ಸಿಟಿ ಆಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಕಾಂಗ್ರೆಸ್ ಏನು ಮಾಡಿದೆ? ದುಡ್ಡಿನ ಬಲದಲ್ಲಿ ಪ್ರಜಾಪ್ರಭುತ್ವ ನಿರ್ಮೂಲನ ಮಾಡಲು ಹೊರಟಿದ್ದಾರೆ. ದಾವಣಗೆರೆ ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಹುಡುಗನನ್ನು ಸೋಲಿಸಬೇಕು ಎಂದು ಪ್ರಲ್ಹಾದ ಜೋಶಿ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಜಿಎಂ ಸಿದ್ದೇಶ್ವರ, ಶಾಸಕ ಶ್ರೀವತ್ಸ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಎಚ್.ಪಿ.ರಾಜೇಶ್ ಬಂಗಾರು ಹನುಮಂತು ಮತ್ತಿತರ ಪ್ರಮುಖರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa