
ವಾರಣಾಸಿ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಹರ್ದೋಯಿನಲ್ಲಿ ಮಹತ್ವಾಕಾಂಕ್ಷಿ ಗಂಗಾ ಎಕ್ಸ್ಪ್ರೆಸ್ ವೇಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಈಶಾನ್ಯ ರಾಜ್ಯ ಸಿಕ್ಕಿಂಗೆ ಎರಡು ದಿನಗಳ ಭೇಟಿ ಮುಗಿಸಿ, ಪ್ರಧಾನಿ ನಿನ್ನೆ ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಾಸಿಗೆ ಆಗಮಿಸಿದ್ದರು. ಸಿಕ್ಕಿಂನಲ್ಲಿ ಸುಮಾರು ₹4,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದ ಅವರು, ವಾರಣಾಸಿಯಲ್ಲಿ ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಿದರು. ಜೊತೆಗೆ, ಉತ್ತರ ಪ್ರದೇಶಕ್ಕೆ ₹6,350 ಕೋಟಿ ಮೌಲ್ಯದ ವಿವಿಧ ಯೋಜನೆಗಳನ್ನೂ ಘೋಷಿಸಿದ್ದಾರೆ.
594 ಕಿ.ಮೀ ಉದ್ದದ ಹೈ-ಸ್ಪೀಡ್ ಕಾರಿಡಾರ್
ಗಂಗಾ ಎಕ್ಸ್ಪ್ರೆಸ್ ವೇ 594 ಕಿಲೋಮೀಟರ್ ಉದ್ದದ, 6-ಲೇನ್ (8-ಲೇನ್ ವರೆಗೆ ವಿಸ್ತರಿಸಬಹುದಾದ) ಗ್ರೀನ್ಫೀಲ್ಡ್ ಹೈ-ಸ್ಪೀಡ್ ಮಾರ್ಗವಾಗಿದ್ದು, ಸುಮಾರು ₹36,230 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಮೀರತ್ದಿಂದ ಪ್ರಯಾಗ್ ರಾಜ್ವರೆಗೆ 12 ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.
ಈ ಎಕ್ಸ್ಪ್ರೆಸ್ವೇಯಿಂದ ಮೀರತ್–ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಸಮಯವು 10–12 ಗಂಟೆಗಳಿಂದ ಸುಮಾರು 6 ಗಂಟೆಗಳಿಗೆ ಇಳಿಯಲಿದೆ.
ರಾಷ್ಟ್ರೀಯ ಭದ್ರತೆಗೆ ಸಹಕಾರ
ಶಹಜಹಾನ್ಪುರ ಜಿಲ್ಲೆಯಲ್ಲಿ 3.5 ಕಿ.ಮೀ ಉದ್ದದ ತುರ್ತು ಲ್ಯಾಂಡಿಂಗ್ ಏರ್ಸ್ಟ್ರಿಪ್ ನಿರ್ಮಾಣ ಮಾಡಲಾಗಿದ್ದು, ಇದು ಯುದ್ಧ ಅಥವಾ ತುರ್ತು ಪರಿಸ್ಥಿತಿಯಲ್ಲಿ ವಾಯುಪಡೆಯ ಬಳಕೆಗೆ ಸಹಕಾರಿ ಆಗಲಿದೆ.
ಆರ್ಥಿಕ ಅಭಿವೃದ್ಧಿಗೆ ವೇಗ
ಈ ಎಕ್ಸ್ಪ್ರೆಸ್ವೇ ಮಾರ್ಗದಲ್ಲಿರುವ ಜಿಲ್ಲೆಗಳಲ್ಲಿ ಸುಮಾರು 2,635 ಹೆಕ್ಟೇರ್ ಪ್ರದೇಶದಲ್ಲಿ ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಹಬ್ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಇದರಿಂದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗುವುದರೊಂದಿಗೆ ಪೂರೈಕೆ ಸರಪಳಿ ಸುಧಾರಣೆ, ಕೈಗಾರಿಕಾ ಹೂಡಿಕೆ ಹೆಚ್ಚಳ ಹಾಗೂ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರಕಲಿದೆ.
ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದ್ದು, ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa