
ಕುವೈತ್ ನಗರ, 30 ಮಾರ್ಚ್ (ಹಿ.ಸ.):
ಆ್ಯಂಕರ್:
ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆ ಹೆಚ್ಚುತ್ತಿರುವ ನಡುವೆ ಇರಾನ್ ನಡೆಸಿದ ದಾಳಿಯಲ್ಲಿ ಕುವೈತ್ ವಿದ್ಯುತ್ ಮತ್ತು ನೀರು ನಿರ್ಲವಣೀಕರಣ ಘಟಕಕ್ಕೆ ಭಾರೀ ಹಾನಿಯಾಗಿದ್ದು, ಭಾರತೀಯ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕುವೈತ್ನ ವಿದ್ಯುತ್ ಸಚಿವಾಲಯ ನೀಡಿದ ಹೇಳಿಕೆಯ ಪ್ರಕಾರ, ದೇಶದ ಪ್ರಮುಖ ಸೇವಾ ಕಟ್ಟಡಗಳಲ್ಲಿ ಒಂದಾದ ವಿದ್ಯುತ್ ಮತ್ತು ನೀರು ನಿರ್ಲವಣೀಕರಣ ಘಟಕದ ಮೇಲೆ ದಾಳಿ ನಡೆದಿದ್ದು, ಈ ವೇಳೆ ಕಟ್ಟಡಕ್ಕೆ ಗಮನಾರ್ಹ ಹಾನಿ ಉಂಟಾಗಿದೆ. ದಾಳಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಉದ್ಯೋಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ದಾಳಿ ಬಳಿಕ ತಕ್ಷಣವೇ ತಾಂತ್ರಿಕ ಹಾಗೂ ತುರ್ತು ಪ್ರತಿಕ್ರಿಯೆ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಘಟಕದ ಸಾಮಾನ್ಯ ಕಾರ್ಯಾಚರಣೆ ಪುನಃಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ದಾಳಿಗೆ ಸಂಬಂಧಿಸಿದಂತೆ ಕುವೈತ್ ವಿದ್ಯುತ್ ಸಚಿವಾಲಯ ಮಾಹಿತಿ ನೀಡಿದೆ. ಈ ಕುರಿತು ಇರಾನ್ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಇದರ ಜೊತೆಗೆ, ಕುವೈತ್ ರಕ್ಷಣಾ ಸಚಿವಾಲಯವು ದೇಶದ ವಾಯುಪ್ರದೇಶದಲ್ಲಿ 14 ಕ್ಷಿಪಣಿಗಳು ಮತ್ತು 12 ಡ್ರೋನ್ಗಳು ಪತ್ತೆಯಾಗಿದ್ದಾಗಿ ತಿಳಿಸಿದೆ. ಈ ದಾಳಿಯಲ್ಲಿ ಕೆಲವು ಡ್ರೋನ್ಗಳು ಸೈನಿಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿದ್ದು, ಕನಿಷ್ಠ 10 ಸೈನಿಕರು ಗಾಯಗೊಂಡಿದ್ದಾರೆ.
ಮಧ್ಯಪ್ರಾಚ್ಯದ ಪರಿಸ್ಥಿತಿ ಈಗಾಗಲೇ ಗಂಭೀರವಾಗಿದ್ದು, ಯುನೈಟೆಡ್ ಸ್ಟೇಟ್ಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆಯುತ್ತಿದೆ. ಇತ್ತೀಚೆಗೆ ಇರಾನ್ ಸಂಸತ್ತಿನ ಸ್ಪೀಕರ್, ನೆಲದ ಮೇಲಿನ ದಾಳಿ ನಡೆದರೆ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಪ್ರತಿದಾಳಿ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಕ್ಷಿಣ ಲೆಬನಾನ್ನಲ್ಲಿ ದಾಳಿಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದು, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದೆ.
ನಿರ್ಲವಣೀಕರಣ ಘಟಕಗಳ ಮಹತ್ವ:
ನೀರು ನಿರ್ಲವಣೀಕರಣ ಘಟಕಗಳು ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರಾಗಿ ಪರಿವರ್ತಿಸುವ ಪ್ರಮುಖ ಮೂಲಸೌಕರ್ಯವಾಗಿವೆ. ಇವು ಕೈಗಾರಿಕಾ ಬಳಕೆಯಲ್ಲಿಯೂ ಮಹತ್ವಪೂರ್ಣವಾಗಿದ್ದು, ಸಾಮಾನ್ಯವಾಗಿ ವಿದ್ಯುತ್ ಸ್ಥಾವರಗಳೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa