
ಪ್ಯಾರಿಸ್, 27 ಮಾರ್ಚ್ (ಹಿ.ಸ.):
ಆ್ಯಂಕರ್:
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಫ್ರಾನ್ಸ್ನಲ್ಲಿ ನಡೆಯುತ್ತಿರುವ ಜಿ7 ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿ, ಜಾಗತಿಕ ಆಡಳಿತದಲ್ಲಿನ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಪ್ರಾನ್ಸ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಗೆ ಭಾರತವನ್ನು ಆಹ್ವಾನಿಸಲಾಗಿದ್ದು, ಪ್ಯಾರಿಸ್ ಸಮೀಪದ ವಾಕ್ಸ್-ಡಿ-ಸೆರ್ನೆ ಅಬ್ಬೆಯಲ್ಲಿ ಸಭೆ ನಡೆಯುತ್ತಿದೆ. ಜಿ7 ಸದಸ್ಯರಲ್ಲದಿದ್ದರೂ, ಭಾರತವು ಪ್ರಮುಖ ಪಾಲುದಾರ ದೇಶವಾಗಿ ಭಾಗವಹಿಸಿದೆ.
ಸಭೆಯಲ್ಲಿ ಮಾತನಾಡಿದ ಜೈಶಂಕರ್, ಯುಎನ್ ಭದ್ರತಾ ಮಂಡಳಿ ಸುಧಾರಣೆ, ಶಾಂತಿಪಾಲನಾ ಕಾರ್ಯಾಚರಣೆಗಳ ಸುಗಮತೆ ಮತ್ತು ಮಾನವೀಯ ಪೂರೈಕೆ ಸರಪಳಿಗಳ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಜೊತೆಗೆ, ಜಾಗತಿಕ ದಕ್ಷಿಣ ರಾಷ್ಟ್ರಗಳಿಗೆ ಎದುರಾಗಿರುವ ಇಂಧನ ಸವಾಲುಗಳು, ರಸಗೊಬ್ಬರ ಪೂರೈಕೆ ಮತ್ತು ಆಹಾರ ಭದ್ರತೆ ಕುರಿತ ಸಮಸ್ಯೆಗಳನ್ನೂ ಪ್ರಸ್ತಾಪಿಸಿದರು.
ಫ್ರಾನ್ಸ್ ಆಗಮನದ ವೇಳೆ, ಫ್ರೆಂಚ್ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರಟ್ ಅವರು ಜೈಶಂಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಜಿ7 ವೇದಿಕೆಯಲ್ಲಿ ಭಾರತವು ಜಾಗತಿಕ ಸಮಸ್ಯೆಗಳ ಕುರಿತು ತನ್ನ ನಿಲುವು ಮಂಡಿಸಿರುವುದು ಮಹತ್ವದ್ದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa