
ಬೆಂಗಳೂರು, 26 ಮಾರ್ಚ್ (ಹಿ.ಸ.):
ಆ್ಯಂಕರ್:ರಾಜ್ಯ ವಿಧಾನಸಭೆಯಲ್ಲಿ ಗುರುವಾರ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವೆ ತೀವ್ರ ವಾಕ್ಸಮರ ಉಂಟಾಗಿ ಸದನದಲ್ಲಿ ಭಾರೀ ಗದ್ದಲ ಸೃಷ್ಟಿಯಾಯಿತು.
ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಚರ್ಚೆ ಮಾಡುವುದಾಗಿ ಡಿಸಿಎಂ ಹೇಳುತ್ತಿದ್ದಂತೆಯೇ, “ಹೇಳಬೇಕಾದ್ದನ್ನೆಲ್ಲ ಹೇಳಿ” ಎಂದು ಮುನಿರತ್ನ ಟಾಂಗ್ ನೀಡಿದರು. ಇದರಿಂದ ಉಗ್ರಗೊಂಡ ಡಿಕೆ ಶಿವಕುಮಾರ್, ಮುನಿರತ್ನ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿ, ಆಕ್ಷೇಪಾರ್ಹ ಪದಗಳನ್ನು ಬಳಸಿದರು. ಈ ಹೇಳಿಕೆ ಸದನದಲ್ಲಿ ಭಾರೀ ಅಶಾಂತಿಗೆ ಕಾರಣವಾಯಿತು.
ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಶಾಸಕ ಸಿ.ಎನ್. ಅಶ್ವಥ್ ನಾರಾಯಣ್ ಡಿಸಿಎಂ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಮುನಿರತ್ನ ಈ ವಿಷಯವನ್ನು ಚರ್ಚೆಗೆ ತಂದುಕೊಳ್ಳುವುದಾಗಿ ಹಠ ಹಿಡಿದು ವಾಗ್ದಾಳಿ ಮುಂದುವರೆಸಿದರು.
ಮುನಿರತ್ನ, ತಮ್ಮ ವಿರುದ್ಧದ ಪ್ರಕರಣಗಳು ರಾಜಕೀಯ ಪ್ರೇರಿತವಾಗಿದ್ದು, ತಮಗೆ ಅನ್ಯಾಯವಾಗಿದೆಯೆಂದು ಆರೋಪಿಸಿದರು. “ನನ್ನ ಮೇಲೆ ಹಾಕಿರುವ ಕೇಸ್ಗಳು ಇವರು ಮಾಡಿದ ಪಾಪದ ಫಲ. ನನ್ನನ್ನು ಜೈಲಿಗೆ ಕಳುಹಿಸಿದ್ದು ಇವರೇ,” ಎಂದು ಅವರು ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು.
ವಾಕ್ಸಮರ ತೀವ್ರಗೊಂಡಂತೆ, ಡಿಸಿಎಂ ಮತ್ತು ಮುನಿರತ್ನ ನಡುವೆ ಪರಸ್ಪರ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳು ನಡೆಯಿತು. ಈ ವೇಳೆ ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಸದನದ ಶಿಸ್ತನ್ನು ಕಾಪಾಡುವಂತೆ ಆಗ್ರಹಿಸಿ, ಡಿಸಿಎಂ ಬಳಕೆ ಮಾಡಿದ ಪದಗಳು ಸೂಕ್ತವಲ್ಲವೆಂದು ಅಭಿಪ್ರಾಯಪಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa