
ಬೆಂಗಳೂರು, 25 ಮಾರ್ಚ್ (ಹಿ.ಸ.):
ಆ್ಯಂಕರ್:
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರ ಸಾಲದ ಮೇಲೆ ನಡೆಯುತ್ತಿದೆ ಎಂಬ ಟೀಕೆಯನ್ನು ತಳ್ಳಿ ಹಾಕಿ, “ಅದು ವಾಸ್ತವಕ್ಕೆ ದೂರವಾದ ಮಾತು” ಎಂದು ಸ್ಪಷ್ಟಪಡಿಸಿದರು.
₹4.48 ಲಕ್ಷ ಕೋಟಿ ಬಜೆಟ್ ಗಾತ್ರದಲ್ಲಿ ₹1.32 ಲಕ್ಷ ಕೋಟಿ ಸಾಲ ಮಾಡಿರುವುದನ್ನು “ಸಾಲದ ಬಜೆಟ್” ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು. ಯಾವುದೇ ರಾಜ್ಯ ಅಥವಾ ದೇಶವಾಗಲಿ, ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣಕ್ಕಾಗಿ ಸಾಲ ಮಾಡುವುದು ಅನಿವಾರ್ಯವಾಗಿದ್ದು, ಸರ್ಕಾರ ಸಾಲವನ್ನು ನಿಯಮಿತ ಮಿತಿಯೊಳಗೆ ಮಾಡುತ್ತಿದೆ ಎಂದರು.
ರಾಜ್ಯದ ಒಟ್ಟು ಸಾಲದ ಮೊತ್ತ ₹8.24 ಲಕ್ಷ ಕೋಟಿಯಷ್ಟಿದ್ದು, ಇದು ಆರ್ಥಿಕ ವ್ಯವಸ್ಥೆಯ ಭಾಗವೇ ಹೊರತು ಅಸಾಮಾನ್ಯವಲ್ಲ ಎಂದು ಮುಖ್ಯಮಂತ್ರಿ ಹೇಳಿದರು. 2008ರಿಂದ 2013ರವರೆಗೆ ಬಿಜೆಪಿ ಆಡಳಿತದಲ್ಲಿಯೂ ಸಾಲ ಮಾಡಲಾಗಿತ್ತು. ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಸಾಲದ ಪ್ರಮಾಣ ಹೆಚ್ಚಾಗುವುದು ಸಹಜ ಪ್ರಕ್ರಿಯೆ ಎಂದು ಅವರು ವಿವರಿಸಿದರು.
ಗ್ಯಾರಂಟಿ ಯೋಜನೆಗಳಿಂದ ಸಾಲ ಹೆಚ್ಚಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಇದುವರೆಗೆ ₹1.31 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಮಹಾರಾಷ್ಟ್ರದಲ್ಲಿ ಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿಮೆಯಾಗುತ್ತಿದ್ದರೆ, ಕರ್ನಾಟಕದಲ್ಲಿ ಗ್ಯಾರಂಟಿಗಳಿಗೆ ನಿರಂತರವಾಗಿ ಅನುದಾನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಯುವನಿಧಿ ಯೋಜನೆಗೆ ₹600 ಕೋಟಿ ಮೀಸಲಿದ್ದು, ಯೋಜನೆ ಸ್ಥಗಿತಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa