ಸರ್ಕಾರಿ ಪ್ರಥಮ ದರ್ಜೆ ಬಾಲಕರ ಕಾಲೇಜಿನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ
ಸರ್ಕಾರಿ ಪ್ರಥಮ ದರ್ಜೆ ಬಾಲಕರ ಕಾಲೇಜಿನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ
ಸರ್ಕಾರಿ ಪ್ರಥಮ ದರ್ಜೆ ಬಾಲಕರ ಕಾಲೇಜಿನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ


ಕೋಲಾರ, ೨೫ ಮಾರ್ಚ್ (ಹಿ.ಸ):

ಆಂಕರ್ : ಮನುಷ್ಯನ ಅಂಗಾಂಗಗಳಲ್ಲಿ ಕಣ್ಣುಗಳಿಗೆ ಹೆಚ್ಚಿನ ಮಹತ್ವವಿದ್ದು, ವಿದ್ಯಾರ್ಥಿ ಸಮುದಾಯ ನೇತ್ರಗಳ ರಕ್ಷಣೆಗೆ ಒತ್ತು ನೀಡಬೇಕು, ಅತಿಯಾದ ಮೊಬೈಲ್ ಬಳಕೆಯಿಂದ ಹೊರ ಬರಬೇಕು,ಕಾಲಕಾಲಕ್ಕೆ ತಪಾಸಣೆಗೆ ಒಳಗಾಗಬೇಕು ಎಂದು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮತ್ತು ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಶಂಕರಪ್ಪ ಕರೆ ನೀಡಿದರು.

ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಬಾಲಕರ ಕಾಲೇಜಿನಲ್ಲಿ ಎನ್ಎಸ್ಎಸ್ ಮತ್ತು ರೆಡ್ ಕ್ರಾಸ್ ಘಟಕ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ಹೊಸಕೋಟೆ,ಕನ್ನಡ ಸಾಹಿತ್ಯ ಪರಿಷತ್ತು ಕೋಲಾರ ಮತ್ತು ಶಂಕರ್ ಕಣ್ಣಿನ ಆಸ್ಪತ್ರೆ ಹೊಸಕೋಟೆ ರವರ ಸಂಯುಕ್ತ ಆಶ್ರಯದಲ್ಲಿ ವಿಧ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಣ್ಣಿನ ಮಹತ್ವ ಇಂದು ಪ್ರತಿಯೊಬ್ಬರಿಗೂ ತಿಳಿದಿದೆ, ಆದ್ದರಿಂದಲೇ ಮಕ್ಕಳಲ್ಲೂ ನೇತ್ರದಾನದ ಮಹತ್ವ ತಿಳಿಸಿಕೊಡುವ ಪ್ರಯತ್ನವಾಗಿದೆ ಎಂದ ಅವರು, ನೇತ್ರದಾನದಂತಹ ಮಹತ್ಕಾರ್ಯದ ಅರಿವು ನೀಡಬೇಕು, ವಿಜ್ಞಾನ ಬೆಳದಂತೆ ಇಂದು ಓರ್ವ ವ್ಯಕ್ತಿ ನಾಲ್ವರಿಗೆ ನೇತ್ರದಾನ ಮಾಡಿ ಬೆಳಕು ನೀಡಬಹುದಾಗಿದೆ, ಇದನ್ನು ಅರಿತು ಪ್ರತಿಯೊಬ್ಬರಿಗೂ ನೇತ್ರದಾನದ ಮಹತ್ವ ತಿಳಿಸಿಕೊಡಬೇಕು ಎಂದರು.

ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯವಾಗಿದ್ದು ದೇಹದ ಎಲ್ಲಾ ಅಂಗಗಳು ಆರೋಗ್ಯವಾಗಿರಬೇಕು ವಿಶೇಷವಾಗಿ ಕಣ್ಣು ಅತ್ಯಂತ ಮಹತ್ವದ ಅಂಗವಾಗಿದ್ದು ಎಲ್ಲರೂ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಮತ್ತು ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮಾನವನಿಗೆ ಅಗತ್ಯವಾಗಿದ್ದರೂ ಅತಿಯಾದ ಉಪಯೋಗ ಮತ್ತು ಅತಿ ಹತ್ತಿರದಿಂದ ಮೊಬೈಲ್ ವೀಕ್ಷಣೆಯಿಂದ ಕೂಡ ಕಣ್ಣಿನ ತೊಂದರೆ ಕಾಣಿಸಿಕೊಳ್ಳುತ್ತಿದೆ ಇದರಿಂದ ಜನರು ಜಾಗೃತಿಯಿಂದ ಇರಬೇಕು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ಮತ್ತು ಶಂಕರ್ ಕಣ್ಣಿನ ಆಸ್ಪತ್ರೆ ಈ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ವಿಶ್ವನಾಥ್ ರವರಿಗೆ ದನ್ಯವಾದಗಳು ಎಂದು ತಿಳಿಸಿದರು.

ಪ್ರೊ.ಶ್ರೀನಿವಾಸ ಮೂರ್ತಿ ಎನ್ಎಸ್ಎಸ್ ಮೂಲಕ ವಿಧ್ಯಾರ್ಥಿಗಳು ಸಮಾಜ ಸೇವೆ ಮಾಡಬೇಕೆಂದು ತಿಳಿಸಿ, ರಾಷ್ಟ್ರೀಯ ಸೇವಾಯೋಜನೆಯ ಮೂಲಕ ಇಂತಹ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳೋಣ ಎಂದರು.

ಕರ್ನಾಟಕ ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ಮಾತನಾಡಿ, ಪಠ್ಯದ ಜತೆಗೆ ಕ್ರೀಡಾ,ಸಾಂಸ್ಕೃತಿಕ,ವೈಜ್ಞಾನಿಕ ಚಟುವಟಿಕೆಗಳಲ್ಲೂ ಯುವಕರು ಹೆಚ್ಚು ಪಾಲ್ಗೊಳ್ಳುವಂತೆ ಮಾಡಿದರೆ ಸದಾ ಕ್ರಿಯಾಶೀಲವಾಗಿರುವಂತೆ ಮಾರ್ಗದರ್ಶನ ನೀಡುವ ಮೂಲಕ ಮೊಬೈಲ್ ಬಳಕೆಯಿಂದ ದೂರವಾಗಬಹುದು ಎಂದು ಅಭಿಪ್ರಾಯಪಟ್ಟರು.

ನಮ್ಮ ಸಂಘಟನೆಯ ಮೂಲಕ ಇಂತಹ ಹಲವಾರು ಕಾರ್ಯಕ್ರಮಗಳನ್ನು ಉಚಿತವಾಗಿ ನಡೆಸಿಕೊಟ್ಟಿದ್ದೇವೆ ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದ ಅವರು, ಈ ಶಿಬಿರದಲ್ಲಿ ಉಚಿತ ತಪಾಸಣೆ, ಔಷಧಿ ನೀಡುತ್ತಿದ್ದೇವೆ, ಅಗತ್ಯವಾದಲ್ಲಿ ಹೆಚ್ಚಿನ ಚಿಕಿತ್ಸೆಗೂ ನೆರವಾಗುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ನಾರಾಯಣಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಪಿ.ಆರ್.ಒ.ಶಿವಪ್ರಕಾಶ್, ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಸುಗುಣ,ಡಾ.ಶೈಲಜ,ಪ್ರೊ.ವೆಂಕಟರವಣಪ್ಪ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande