
ಕೋಲಾರ ೨೧ ಮಾರ್ಚ್ (ಹಿ.ಸ):
ಆ್ಯಂಕರ್: ಕ್ರೀಡೆಗಳು ಎನ್ನುವುದು ಕೇವಲ ಒಂದು ಆಟವಲ್ಲ. ಅದು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯಕ್ಕೂ ಹಾಗೂ ನಾಯಕರಾಗಿ ರೂಪಗೊಳ್ಳಲು ಮುಖ್ಯ ಪಾತ್ರವಹಿಸುತ್ತದೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು.
ಕೋಲಾರ ತಾಲೂಕಿನ ದೊಡ್ಡ ಹಸಾಳ ಗ್ರಾಮದಲ್ಲಿ ಗಂಗೋತ್ರಿ ಕ್ರಿಕೆಟರ್ಸ್ ಯುವಕರ ಬಳಗ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಇನ್ನೂ ಗ್ರಾಮೀಣ ಭಾಗದ ಯುವಕರು ನಿರಂತರವಾಗಿ ಕ್ರೀಡಾ ಅಭ್ಯಾಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಗ್ರಾಮ ಮಟ್ಟದ ಕ್ರೀಡಾಕೂಟದಿಂದ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟಗಳ ಆಯೋಜನೆಯಲ್ಲಿ ತೊಡಗುವ ಚಿಂತನೆ ಯುವಕರಲ್ಲಿ ಮೂಡಬೇಕು ಎಂದರು.
ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದ ಪ್ರತಿ ಕ್ಷಣವೂ ಗ್ರಾಮದ ಯುವ ಮುಖಂಡರು ಹಾಗೂ ಹಿರಿಯ ಮುಖಂಡರೊಂದಿಗೆ ಸಕ್ರಿಯವಾಗಿರುವೆ, ಎಂದರಲ್ಲದೆ, ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ ಯಾರೇ ಗೆದ್ದರೂ ಸೋತರು ನಮ್ಮ ಸಹೋದರರು ಎನ್ನುವ ಮನೋಭಾವವನ್ನು ಬೆಳಸಿಕೊಂಡು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿ, ಸೋತೆ ಎಂಬ ಜಿಗುಪ್ಸೆ ಬಿಡಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋಲು ಕಂಡಿದ್ದರೂ ಸಹ ದೃತಿಗೆಡದೆ ಸೋಲೇ ಮುಂದಿನ ಗೆಲುವಿನ ಸೋಪಾನದ ಮೆಟ್ಟಿಲಾಗಬೇಕು ಎನ್ನುವ ರೀತಿಯಲ್ಲಿ ಸದಾ ಕ್ರಿಯಾಶೀಲರಾಗಿರಬೇಕೆಂದರು.
ಕೋಲಾರ ತಾಲೂಕಿನ ದೊಡ್ಡ ಹಸಾಳ ಗ್ರಾಮದಲ್ಲಿ ಕಳೆದ ೩೦ ವರ್ಷಗಳಿಂದ ಯುವಕರ ತಂಡ ಕ್ರೀಡಾಕೂಟವನ್ನು ನಿರಂತರವಾಗಿ ಆಯೋಜನೆ ಮಾಡಿಕೊಂಡು ಬರುತ್ತಿರುವುದು ಮೆಚ್ಚುಗೆ ಸಂಗತಿಯಾಗಿದ್ದು, ಸುತ್ತಮುತ್ತಲಿನ ಗ್ರಾಮದ ಯುವಕರು ಹಾಗೂ ಗ್ರಾಮದ ಯುವಕರು ದುಶ್ಚಟಗಳಿಂದ ದೂರ ಉಳಿಯಲು ಕ್ರೀಡಾಕೂಟಗಳ ಮೂಲಕ ಉತ್ತಮ ದಾರಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ನುಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಮುಳವಾಗಲಪ್ಪ, ರಾಜಣ್ಣ, ನಾಗಣ್ಣ, ಲೋಕೇಶ್ ಹಾಗೂ ಯುವ ಮುಖಂಡರು ಗ್ರಾಮಸ್ಥರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್