ಧರ್ಮಸ್ಥಳ ಕ್ಷೇತ್ರದಿಂದ ಸವುಳು ಹಳ್ಳದ ಕೆರೆಗೆ ಕಾಯಕಲ್ಪ
ಕೊಪ್ಪಳ, 17 ಮಾರ್ಚ್ (ಹಿ.ಸ.) ಆ್ಯಂಕರ್: ಶಹಪುರ ಗ್ರಾಮದ ಸವುಳು ಹಳ್ಳದ ಕೆರೆಗೆ ಕಾಯಕಲ್ಪ ನೀಡಲು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮುಂದಾಗಿದೆ ಎಂದು ಗ್ರಾಮದ ಯುವ ಧುರೀಣರು, ಸಮಾಜ ಸೇವಕರಾದ ಮಂಜುನಾಥ ರಾಟಿ ಅವರು ತಿಳಿಸಿದ್ದಾರೆ. ಕಳೆದ ನೂರಾರು ವರ್ಷಗಳಿಂದ ಜ
ಧರ್ಮಸ್ಥಳ ಕ್ಷೇತ್ರದಿಂದ ಸವುಳು ಹಳ್ಳದ ಕೆರೆಗೆ ಕಾಯಕಲ್ಪ


ಧರ್ಮಸ್ಥಳ ಕ್ಷೇತ್ರದಿಂದ ಸವುಳು ಹಳ್ಳದ ಕೆರೆಗೆ ಕಾಯಕಲ್ಪ


ಕೊಪ್ಪಳ, 17 ಮಾರ್ಚ್ (ಹಿ.ಸ.)

ಆ್ಯಂಕರ್: ಶಹಪುರ ಗ್ರಾಮದ ಸವುಳು ಹಳ್ಳದ ಕೆರೆಗೆ ಕಾಯಕಲ್ಪ ನೀಡಲು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮುಂದಾಗಿದೆ ಎಂದು ಗ್ರಾಮದ ಯುವ ಧುರೀಣರು, ಸಮಾಜ ಸೇವಕರಾದ ಮಂಜುನಾಥ ರಾಟಿ ಅವರು ತಿಳಿಸಿದ್ದಾರೆ.

ಕಳೆದ ನೂರಾರು ವರ್ಷಗಳಿಂದ ಜನ-ಜಾನುವಾರುಗಳ ಜೀವನಾಡಿಯಾಗಿರುವ ಸವುಳು ಹಳ್ಳದ ಕೆರೆ ನಿರ್ಮಾಣಕ್ಕೆ ಗ್ರಾಮಸ್ಥರು ಚರ್ಚಿಸಿದ್ದೆವು. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹ ಸದಸ್ಯರಾಗಿರುವ ತಾವು ಅಧಿಕಾರಿಗಳೊಂದಿಗೆ ಮಾತನಾಡಿದ್ದು ಸೂಕ್ತ ಸ್ಪಂದನೆ ಲಭಿಸಿದೆ. ರಾಷ್ಟ್ರೀಯ ಹೆದ್ದಾರಿ-೫೦ ರ ಬದಿಯಲ್ಲಿರುವ ಈ ಕೆರೆ ಅಭಿವೃದ್ಧಿಪಡಿಸಿದರೆ ಜನ-ಜಾನುವಾರುಗಳಿಗೆ ಅನುಕೂಲವಾಗುತ್ತದೆ. ೧೦ ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಗೋಮಾಳ ಸ್ಥಳವು ಸಂಪೂರ್ಣ ಸರ್ಕಾರದ್ದಾಗಿದೆ. ಕೆರೆಯ ದಡದಲ್ಲಿ ಗ್ರಾಮದ ಕುರಿಗಾಹಿಗಳು ಮತ್ತು ದನಗಾಹಿಗಳು ಕಳೆದ ಹಲವಾರು ದಶಕಗಳಿಂದ ಇಲ್ಲಿ ಬೀಡು ಬಿಟ್ಟಿದ್ದಾರೆ. ಕೆರೆ ಅಭಿವೃದ್ಧಿ ಆದರೆ ವರ್ಷಪೂರ್ತಿ ನೀರು ಲಭಿಸುತ್ತದೆ. ಬೇಸಿಗೆ ಕಾಲದಲ್ಲಿ ನೀರಿನ ಬವಣೆಯಿಂದ ಮುಕ್ತಿ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಈ ಕುರಿತು ಶ್ರೀ ತಿರುಗಲ್ ತಿಮ್ಮಪ್ಪ ಶ್ರೀ ಲಕ್ಷ್ಮೀ ದೇವಿ ಮತ್ತು ಶ್ರೀ ತೇರಿನ ಹನುಮಂತರಾಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವೀರಣ್ಣ ಕೋಮಲಾಪುರ ಅವರೊಡಗೂಡಿ ಕೆರೆ ಸ್ಥಳ ಪರಿಶೀಲನೆ ನಡೆಸಿದ ಅವರು, ಈಗಾಗಲೇ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಕೆರೆ ಅಭಿವೃದ್ಧಿ ಕುರಿತು ಚರ್ಚಿಸಲಾಗಿದೆ. ಕೆರೆಯ ಅಭಿವೃದ್ಧಿಗೆ ಧರ್ಮಸ್ಥಳ ಕ್ಷೇತ್ರವು ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಶೀಘ್ರವೇ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ. ಈ ಕೆರೆ ಅಭಿವೃದ್ಧಿಪಡಿಸುವುದರಿಂದ ನೀರು ಸಂಗ್ರಹಗೊಂಡು ಅಡವಿ ಜೀವಿಗಳಿಗೆ ಆಸರೆ ಆಗುತ್ತದೆ. ಕುರಿ, ದನಗಳಿಗೆ ವರ್ಷಪೂರ್ತಿ ನೀರು ಲಭಿಸುತ್ತದೆ. ಸುತ್ತಲೂ ಕೃಷಿ ಚಟುವಟಿಕೆಗಳು ನಡೆಯುತ್ತಿರುವುದರಿಂದ ಜಲಮರುಪೂರಣವಾಗುತ್ತದೆ. ಮೇಲಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ದಾರಿ ಹೋಕರಿಗೂ ನೀರಿನ ಅವಶ್ಯಕತೆ ಪೂರೈಸಲು ಸಾಧ್ಯವಾಗುತ್ತದೆ ಎಂದು ಮಂಜುನಾಥ ರಾಟಿ ಅವರು ತಿಳಿಸಿದ್ದಾರೆ.

ದಿನಂಪ್ರತಿ ಈ ಭಾಗದಿಂದ ನೂರಾರು ಕೃಷಿ ಕೂಲಿ ಕಾರ್ಮಿಕರು ತಮ್ಮ ದೈನಂದಿನ ಹೊಲ-ಗದ್ದೆಗಳ ಚಟುವಟಿಕೆಗಳಿಗೆ ತೆರಳುತ್ತಿದ್ದಾರೆ. ಬಂಡಿ, ಎತ್ತುಗಳೊಂದಿಗೆ ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರಾಣಿ, ಪಕ್ಷಿಗಳು ಈ ಭಾಗದಲ್ಲಿ ಹೇರಳವಾಗಿದ್ದು ಕೆರೆ ಅಭಿವೃದ್ಧಿಯಾದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತದೆ. ಗ್ರಾಮದ ಬಹುತೇಕ ರೈತರ, ಕುರಿಗಾಹಿ ಮತ್ತು ದನಗಾಹಿಗಳ ಏಕೈಕ ಜೀವನಾಡಿಯಾಗಿರುವುದರಿಂದ ಕೆರೆ ಅಭಿವೃದ್ಧಿ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸವುಳು ಹಳ್ಳದ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಈರನಗೌಡ(ಸುರೇಶ್) ಪಾಟೀಲ್, ಮಲ್ಲಿಕಾರ್ಜುನ ಕುರಿ, ಗಿರೀಶ್ ಹಿರೇಮಠ, ನಿಂಗಪ್ಪ ನಾಗಲಾಪುರ, ನಿಂಗಜ್ಜ ಚೌಧರಿ, ಅಮರೇಶ್ ಕಟ್ಟಿ, ಹುಲ್ಲೇಶ್ ಸಿಂದೋಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹಾಲಪ್ಪ ತೋಟದ, ಹನುಮಂತ ಗೊಲ್ಲರ, ನಾಗರಾಜ ದೊಡ್ಡಮನಿ, ಗಂಗಮ್ಮ ಪೂಜಾರ ಸೇರಿದಂತೆ ಗ್ರಾಮದ ಸಮಸ್ತರು ಕೆರೆ ಅಭಿವೃದ್ಧಿಯ ಮಹತ್ವದ ಕುರಿತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande