ಹಾವು ಕಡಿತದಿಂದಾಗುವ ಜೀವ ಹಾನಿ ತಡೆಗೆ ಜಾಗೃತಿ ಮೂಡಿಸಿ : ಡಾ. ಸುರೇಶ ಬಿ. ಇಟ್ನಾಳ
ಕೊಪ್ಪಳ , 25 ಫೆಬ್ರವರಿ (ಹಿ.ಸ.): ಆ್ಯಂಕರ್ : ಹಾವು ಕಡಿತದಿಂದ ಉಂಟಾಗುವ ಜೀವ ಹಾನಿಯನ್ನು ತಡೆಗಟ್ಟಲು ಸಾರ್ವಜನಿಕರಿಗೆ ಸೂಕ್ತ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊಪ್ಪಳ ಜಿಲ್ಲೆಯಲ್ಲಿ ಹಾವು ಕಡಿತ ತಡೆಗಟ್ಟುವಿಕ
Create awareness to prevent loss of life due to snake bites: Dr. Suresh B. Itnal


ಕೊಪ್ಪಳ , 25 ಫೆಬ್ರವರಿ (ಹಿ.ಸ.):

ಆ್ಯಂಕರ್ : ಹಾವು ಕಡಿತದಿಂದ ಉಂಟಾಗುವ ಜೀವ ಹಾನಿಯನ್ನು ತಡೆಗಟ್ಟಲು ಸಾರ್ವಜನಿಕರಿಗೆ ಸೂಕ್ತ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ನಮ್ಮ ಭಾರತ ಹೆಚ್ಚು ಹಳ್ಳಿಗಳನ್ನು ಹೊಂದಿರುವ ದೇಶ ಮತ್ತು ಶೇ.70 ಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ಅವಲಂಬಿತರಾಗಿದ್ದಾರೆ. ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ಹಾವುಗಳ ತಿರುಗಾಟ ಹೆಚ್ಚಿರುತ್ತದೆ. ಕೃಷಿ ಮತ್ತು ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಂತಹ ಕೃಷಿ ಕುಲಕಸುಬುಗಳಲ್ಲಿ ತೊಡಗಿರುವ ರೈತರು ಮತ್ತು ಗ್ರಾಮೀಣ ಭಾಗದ ಜನರಿಗೆ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣಗಳ ಕುರಿತು ಅರಿವು ಮೂಡಸಬೇಕು ಎಂದರು.

ಮನೆಗಳ ಸುತ್ತ ಮುತ್ತಲಿನ ತಾಣಗಳಲ್ಲಿ ಕಸದ ರಾಸಿ ಇದ್ದರೆ ಅದು ಹೆಚ್ಚು ಹಾವುಗಳನ್ನು ಆಕರ್ಷಿಸುತ್ತದೆ. ಗಿಡಗಂಟೆಗಳು ತುಂಬಿದ ದಾರಿ ಹಾವು ಕಡಿತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾರ್ವಜನಿಕರು ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾವು ಕಡಿತಕ್ಕೆ ಉಚಿತವಾಗಿ ಚಿಕಿತ್ಸೆ ಲಭ್ಯವಿದ್ದು, ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ 24*7 ಚಿಕಿತ್ಸೆಯನ್ನು ನೀಡಲು ಎಲ್ಲಾ ಆಸ್ಪತ್ರೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಹಾವು ಕಡಿತ ಉಂಟಾದ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ನಾಟಿ ವೈದ್ಯರ ಬಳಿ ಹೋಗದೇ ಕೂಡಲೇ 40 ನಿಮಿಷದೊಳಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯದುಕೊಳ್ಳುವಂತೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನಂದಕುಮಾರ್ ಅವರು ಮಾತನಾಡಿ, ರಾತ್ರಿ ಸಮಯದಲ್ಲಿ ಮನೆಯ ಹೊರಗಡೆ ನೆಲದ ಮೇಲೆ ಮಲಗುವುದರಿಂದ ಹಾವು ಅಥವಾ ಇತರೆ ಕೀಟಗಳು ಸಂಚರಿಸಬಹುದು. ಹಾಗಾಗಿ ಮೇಜು, ದಿವಾನ ಕಾಟ್, ಕಟ್ಟೆ ಅಥವಾ ಎತ್ತರ ಸ್ಥಳಗಳಲ್ಲಿ ಮಲಗುವುದು ಸೂಕ್ತವಾಗಿದೆ. ಬೆಳಕಿನಲ್ಲದೆ ಬರಿಗಾಲಲ್ಲಿ ನಡೆಯುವುದು ಹಾವು ಕಡಿತದ ಸಂಭವವನ್ನು ಹೆಚ್ಚಿಸುತ್ತದೆ. ಸ್ವಚ್ಛ ವಾಗಿರದ ಹೊಲ ಗದ್ದೆಗಳು ಹಾವಿನ ಸಂಖ್ಯೆಯನ್ನು ಹೆಚ್ಚಿಸುತ್ತದೆ ಹಾಗೂ ಅಲ್ಲಿ ನಡೆದಾಡುವುದು ಅಪಾಯಕಾರಿ ಮತ್ತು ಸೌದೆಗಳ ಕಟ್ಟನ್ನು ಪರಿಶೀಲಿಸದೇ ಎತ್ತುವುದು ಅಪಾಯಕಾರಿಯಾಗಿದ್ದು, ಹಾವು ಕಡಿತದಿಂದ ಪಾರಾಗಲು ಸಾರ್ವಜನಿಕರು ಕಸವನ್ನು ಬುಟ್ಟಿಗಳಲ್ಲಿ ಹಾಕಿ, ತಮ್ಮ ಮನೆ ಸುತ್ತಮುತ್ತ ಗಿಡಗಂಟೆಗಳನ್ನು ಚಿಕ್ಕದಾಗಿ ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಡೆದಾಡುವ ದಾರಿಗಳನ್ನು ಕಳೆ ಮುಕ್ತ ಮಾಡುವದರಿಂದ ಹಾವಿನ ಕಡಿತವನ್ನು ಕಡಿಮೆ ಮಾಡಬಹುದು.

ರಾತ್ರಿ ಸಮಯದಲ್ಲಿ ಓಡಾಡುವಾಗ ಟಾರ್ಚನ್ನು ಉಪಯೋಗಿಸಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಹೆಚ್ಚು ಸುರಕ್ಷಿತ. ರೈತರು ಹಾವಿನ ಕಡಿತದಿಂದ ರಕ್ಷಿಸಿಕೊಳ್ಳಲು ಗಮ್ ಪೂನ್ (ರಬ್ಬರ ಬೂಟ್) ಉಪಯೋಗಿಸಬೇಕು. ಹೊಲ ಗದ್ದೆಗಳನ್ನು ಕಳೆಗಳಿಂದ ಸ್ವಚ್ಛವಾಗಿರಿಸಬೇಕು. ಸೌದೆ ಕಟ್ಟುಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಉಪಯೋಗಿಸುವ ಅಥವಾ ಎತ್ತಿಕೊಳ್ಳುವ ಮೊದಲು ಪರಿಶೀಲಿಸಬೇಕು. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಮತ್ತು ವಿಶೇಷವಾಗಿ ರೈತರು ಈ ಎಲ್ಲಾ ಸುರಕ್ಷಿತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಾವು ಕಡಿತವನ್ನು ತಡೆಗಟ್ಟಬೇಕೆಂದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾ ಮಹಾಂತೇಶ ಎಸ್. ದರಗದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಆರ್.ಸಿ.ಹೆಚ್. ಅಧಿಕಾರಿ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಕಾಶ ವಿ., ಆರೋಗ್ಯ ಇಲಾಖೆಯ ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ. ರವಿಂದ್ರನಾಥ ಎಂ.ಹೆಚ್., ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ ಪ್ರಕಾಶ ಹೆಚ್. ಸೇರಿದಂತೆ ತಾಲ್ಲೂಕು ವೈದ್ಯಾಧಿಕಾರಿಗಳು, ತಜ್ಞ ವೈದ್ಯರು ಮತ್ತು ಆರೋಗ್ಯ ಇಲಾಖೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande