ಸಮಗ್ರ ಕೃಷಿ ಪದ್ಧತಿ ಎಂದೆಂದಿಗೂ ಉತ್ತಮ : ಕುಲಪತಿ ಡಾ.ಎಂ.ಹನುಮಂತಪ್ಪ
ರಾಯಚೂರು, 02 ಜನವರಿ (ಹಿ.ಸ.) : ಆ್ಯಂಕರ್ : ಸಮಗ್ರ ಕೃಷಿ ಪದ್ಧತಿಯು ಎಂದೆಂದಿಗೂ ಉತ್ತಮ ಕೃಷಿ ಪದ್ಧತಿಯಾಗಿದ್ದು, ವಿಶ್ವವಿದ್ಯಾಲಯದ ವಿಜ್ಞಾನಿಗಳು ಇದನ್ನು ಮನಗಂಡು ವಿಸ್ತರಣಾ ಚಟುವಟುಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದುವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಎಂ. ಹನುಮಂತಪ್ಪ ಅವರು ಸಲಹೆ ನೀಡಿ
ಸಮಗ್ರ ಕೃಷಿ ಪದ್ಧತಿ ಎಂದೆಂದಿಗೂ ಉತ್ತಮ: ಕುಲಪತಿ ಡಾ.ಎಂ.ಹನುಮಂತಪ್ಪ


ರಾಯಚೂರು, 02 ಜನವರಿ (ಹಿ.ಸ.) :

ಆ್ಯಂಕರ್ : ಸಮಗ್ರ ಕೃಷಿ ಪದ್ಧತಿಯು ಎಂದೆಂದಿಗೂ ಉತ್ತಮ ಕೃಷಿ ಪದ್ಧತಿಯಾಗಿದ್ದು, ವಿಶ್ವವಿದ್ಯಾಲಯದ ವಿಜ್ಞಾನಿಗಳು ಇದನ್ನು ಮನಗಂಡು ವಿಸ್ತರಣಾ ಚಟುವಟುಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದುವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಎಂ. ಹನುಮಂತಪ್ಪ ಅವರು ಸಲಹೆ ನೀಡಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೃಷಿ ಅಭಿವೃದ್ಧಿ ಸಹಕಾರಿ ನಿಯಮಿತ, ಬಾರಾಮುಲ್ಲಾ, ಜಮ್ಮು ಮತ್ತು ಕಾಶ್ಮೀರ ಇವರುಗಳ ಸಹಯೋಗದಲ್ಲಿ ಮೂರು ದಿನಗಳ ಅವಧಿಯ ಕೃಷಿ, ಪಶುವೈದ್ಯಕೀಯ ಮತ್ತು ಕೃಷಿಗೆ ಸಂಬಂಧಿತ ವಿಷಯಗಳಲ್ಲಿ ಸುಸ್ಥಿರ ನಾವಿನ್ಯತೆಗಳ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮ್ಮೇಳನಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಜ್ಞಾನ ಮತ್ತು ಕೌಶಲ್ಯಗಳನ್ನು ವಿನಿಮಯ ಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿವೆ. ಯಾವುದೇ ವಿಷಯದಲ್ಲಿ ಪ್ರಸ್ತುತಿ ಜ್ಞಾನವನ್ನು ಪಡೆಯುವುದು ಅತ್ಯವಶ್ಯವಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ಇಂತಹ ಸಮ್ಮೇಳನಗಳಲ್ಲಿ ತಪ್ಪದೇ ಭಾಗವಹಿಸಬೇಕೆಂದು ಕಿವಿಮಾತು ಹೇಳಿದರು.

ಒಂದು ಸಮೀಕ್ಷೆ ಪ್ರಕಾರ ಸಂಶೋಧನೆಯಲ್ಲಿ ಒಂದು ರೂಪಾಯಿ ಖರ್ಚು ಮಾಡಿದರೆ ಅದರಿಂದ ರೂ. 13.50 ಲಾಭ ಬರುವುದು, ವಿಸ್ತರಣೆಯಲ್ಲಿ 7.00 ರೂ.ಲಾಭ ಬರುವುದು ಮತ್ತು ಕೃಷಿ ಶಿಕ್ಷಣದಲ್ಲಿ ಒಂದು ರೂಪಾಯಿಯನ್ನು ವ್ಯಯಿಸಿದೆರೆ ಕೇವಲ 2.05 ರೂ.ಲಾಭ ಬರುವುದು. ಆದ್ದರಿಂದ ವಿದ್ಯಾರ್ಥಿಗಳಿಗಾಗಲೀ, ರೈತರಿಗಾಗಲೀ ಪರಿಪೂರ್ಣ ಮಟ್ಟದ ಕೃಷಿ ಶಿಕ್ಷಣವು ದೊರೆಯುವಂತಾಗಬೇಕೆಂದರು.

ಇಂದಿನ ವಿದ್ಯಾರ್ಥಿಗಳು ಕೃಷಿ ಶಿಕ್ಷಣವನ್ನು ಪರಿಪೂರ್ಣತೆಯಿಂದ ಪಡೆದು ಉತ್ತಮ ಉದ್ಯಮಿದಾರರಾಗಿ ಹತ್ತಾರು ಜನಕ್ಕೆ ಉದ್ಯೋಗ ಕೊಡುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಡ್ರೋನ್ ಬಳಕೆ ಇತ್ಯಾದಿಗಳನ್ನು ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳು ಕರಗತಮಾಡಿಕೊಂಡು ಕಾರ್ಯಸಾಧುವಾದ ತಂತ್ರಜ್ಞಾನ, ಸುಸ್ಥಿರ ಆರ್ಥಿಕತೆ ಹಾಗೂ ಸಮಾಜ ನಿರೀಕ್ಷಿತ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಈ ವೇಳೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ. ಗುರುರಾಜ ಸುಂಕದ ಅವರು ಮಾತನಾಡಿ, ಕೃಷಿಯೇ ನಮ್ಮೆಲ್ಲರ ಜೀವಾಳವಾಗಿದ್ದು, ಶೇ.48 ರಷ್ಟು ಜನ ನೇರವಾಗಿ ಕೃಷಿ ಅವಲಂಬಿತರಾಗಿರುವರು. ನಮ್ಮ ದೇಶದ ಜಿ.ಡಿ.ಪಿ ಗೆ ಶೇ. 17 ರಷ್ಟು ಕೊಡುಗೆಯು ಕೃಷಿಯದ್ದಾಗಿದೆ. ಆದಾಗ್ಯೂ ಹೆಚ್ಚು ಸಂಕೀರ್ಣವಾದ ಈ ಕ್ಷೇತ್ರವನ್ನು ಕಡೆಗಣಿಸಲ್ಪಟ್ಟಿರುವುದು ವಿಷಾದನೀಯವೆಂದರು.

ರೈತರೇ ಮೊದಲು ಎಂಬ ಸಿದ್ಧಾಂತದೊಂದಿಗೆ ನಾವೆಲ್ಲರೂ ಕೆಲಸಮಾಡಬೇಕಾಗಿದೆ. ವಿದ್ಯಾರ್ಥಿಗಳೂ ಕೂಡ ಕೃಷಿ ಶಿಕ್ಷಣವನ್ನು ಪರಿಪೂರ್ಣತೆಯಿಂದ ಕಲಿತರೆ ಮಾತ್ರ ಉತ್ತಮ ಉದ್ಯೋಗ ಅವಕಾಶಗಳು ದೊರೆಯುವೆವು ಎಂದು ಕಿವಿಮಾತು ಹೇಳಿದರು.

ಈ ವೇಳೆ ಸಮ್ಮೇಳನದ ಸಂಯೋಜಕರಾದ ಡಾ.ಆರ್.ಎ. ಶಾಹ ಬಾರಾಮುಲ್ಲ ಅವರು ಮಾತನಾಡಿ, ಇಂತಹ ಸಮ್ಮೇಳನಗಳು ಜ್ಞಾನಾರ್ಜನೆ, ಮತ್ತು ಕೌಶಲ್ಯಭಿವೃದ್ಧಿಗೆ ಪೂರಕವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಇವುಗಳಲ್ಲಿ ಭಾಗವಹಿಸಿ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದ ನಿರಂತರ ಬೆಳವಣಿಗೆಗೆ ಸಹಕಾರಿಯಾಗಬೇಕೆಂದು ಕರೆ ನೀಡಿದರು.

ಈ ವೇಳೆ ಅಂತರಾಷ್ಟ್ರೀಯ ಸಮ್ಮೇಳನದ ಆಯೋಜನಾ ಸಂಘಟಕರಾದ ಡಾ. ಜಾಗೃತಿ ಬಿ. ದೇಶಮಾನ್ಯ ಅವರು ಸಮಾರೋಪ ಸಮಾರಂಭದಲ್ಲಿ ಹಾಜರಿದ್ದ ಎಲ್ಲರನ್ನು ಸ್ವಾಗತಿಸಿ, ಸಮ್ಮೇಳನದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದ್ದ ಎಲ್ಲ ಸಮ್ಮೇಳನಾರ್ಥಿಗಳಿಗೆ ವಿಶ್ವವಿದ್ಯಾಲಯದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಹಾಗೂ ಮುಂಬರುವ 2026ಕ್ಕೆ ಶುಭಕಾಮನೆಗಳನ್ನು ಕೋರಿದರು.

ಈ ವೇಳೆ ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಜಿ.ಬಿ. ಲೋಕೆಶ್ ಅವರು ಮೂರು ದಿನಗಳ ಅವಧಿಯ ಸಮ್ಮೇಳನದ ವರದಿಯನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಉತ್ತಮ ರೀತಿಯಲ್ಲಿ ಸಂಶೋಧನಾ ಫಲಿತಾಂಶಗಳನ್ನು ಮಂಡಿಸಿದ ಹಾಗೂ ಉತ್ತಮ ರೀತಿಯಲ್ಲಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದ ಸಮ್ಮೇಳನಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಕೃಷಿ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸುರೇಶ್ ಅವರು ಸಮಾರೋಪ ಸಮಾರಂಭಕ್ಕೆ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande