
ಬೆಂಗಳೂರು, 15 ಜನವರಿ (ಹಿ.ಸ.) :
ಆ್ಯಂಕರ್ : ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಭವಿಸುವ ಅಪೂರ್ವ ಪ್ರಕೃತಿ ವಿಸ್ಮಯಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಪ್ರತಿ ವರ್ಷ ಸಂಕ್ರಾಂತಿಯಂದು ಸೂರ್ಯರಶ್ಮಿ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗವನ್ನು ಸ್ಪರ್ಶಿಸುವ ಈ ಅದ್ಭುತ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.
ಈ ಬಾರಿ ಸಂಜೆ 5 ಗಂಟೆ 2 ನಿಮಿಷಕ್ಕೆ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ನಿರೀಕ್ಷೆಯಿದ್ದರೂ, ಸ್ವಲ್ಪ ಸಮಯ ಬದಲಾವಣೆ ಸಂಭವಿಸಿ 5 ಗಂಟೆ 17 ನಿಮಿಷಕ್ಕೆ ಭಾಸ್ಕರನ ಕಿರಣಗಳು ಶಿವಲಿಂಗದ ಮೇಲೆ ಬೀಳಲು ಆರಂಭವಾಯಿತು.
ಸೂರ್ಯರಶ್ಮಿ ಮೊದಲು ದೇಗುಲದ ಹಂಸ ದ್ವಾರದ ಮೂಲಕ ನಂದಿಯನ್ನು ಸ್ಪರ್ಶಿಸಿ, ಬಳಿಕ ನಂದಿಯ ಕೊಂಬಿನ ಮೂಲಕ ಸಾಗುತ್ತಾ ಈಶ್ವರನ ಪೀಠವನ್ನು ತಲುಪಿತು. ನಂತರ ನಿಧಾನವಾಗಿ ಶಿವಲಿಂಗದ ಮೇಲೆ ಸುಮಾರು ಆರು ನಿಮಿಷಗಳ ಕಾಲ ಸೂರ್ಯರಶ್ಮಿ ಬೀಳುವ ಮೂಲಕ ಉತ್ತರಾಯಣದ ಪಥ ಬದಲಾವಣೆಯ ಸಂಕೇತ ನೀಡಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa