
ಬೆಂಗಳೂರು, 15 ಜನವರಿ (ಹಿ.ಸ.) :
ಆ್ಯಂಕರ್ : ಮನರೇಗಾ ಬಿಲ್ ರದ್ದು ವಿಚಾರವಾಗಿ ಗ್ರಾಮೀಣ ಭಾಗದಲ್ಲಿ ದೊಡ್ಡ ಅನ್ಯಾಯ ನಡೆದಿದೆ. ಈ ಹಿನ್ನೆಲೆ ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಪ್ರದಾಯದಂತೆ ರಾಜ್ಯಪಾಲರ ಭಾಷಣವೂ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಇದು ನನ್ನ ಇಲಾಖೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ನಾವು ಮುಂದಾಳತ್ವ ವಹಿಸಿಕೊಂಡಿದ್ದೇವೆ. ವಿಬಿಜಿ ರಾಮ್ ಜಿ ಮತ್ತು ಮನರೇಗಾ ನಡುವಿನ ವ್ಯತ್ಯಾಸವನ್ನು ಜನರ ಮುಂದೆ ಇಟ್ಟಿದ್ದೇವೆ. ಅದರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ವಿವರಿಸಿದ್ದೇವೆ. ಇದನ್ನು ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕವಾಗಿ ಪ್ರಶ್ನೆ ಮಾಡುತ್ತೇವೆ, ಜನರ ನ್ಯಾಯಾಲಯಕ್ಕೂ ಹೋಗುತ್ತೇವೆ ಎಂದು ಹೇಳಿದರು.
ಕೇಂದ್ರ–ರಾಜ್ಯ ಸಂಘರ್ಷ ಬೇಡ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂಘರ್ಷ ಯಾರು ಮಾಡುತ್ತಿದ್ದಾರೆ, ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳನ್ನು ರಾಜ್ಯ ಸರ್ಕಾರ ಕೇಳುತ್ತಿದೆ. ಕನಿಷ್ಠ ರಾಜ್ಯ ಸರ್ಕಾರದ ಜೊತೆ ಸಮಾಲೋಚನೆಯನ್ನೂ ಮಾಡಲ್ಲ. ನಮ್ಮ 40% ಹಣ ತೆಗೆದುಕೊಳ್ಳುವಾಗ ಯಾಕೆ ಅಂತ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು.
ಅರ್ಟಿಕಲ್ 21, 258 ಮತ್ತು 280 ಗಳ ನೇರ ಉಲ್ಲಂಘನೆ ಆಗಿದೆ. ಇದರ ಬಗ್ಗೆ ಚರ್ಚೆಯೇ ಬೇಡವೇ? ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ತೀವ್ರ ಟೀಕೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa