ಲಂಡನ್, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಯುನೈಟೆಡ್ ಕಿಂಗ್ಡಮ್ನ ಲಂಡನ್ ನಗರದ ಥೇಮ್ಸ್ ನದಿಯ ದಂಡೆಯ ಮೇಲೆ ಸ್ಥಾಪಿಸಲಾಗಿರುವ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವೇಶ್ವರರ ಪುತ್ಥಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಪುಷ್ಪನಮನ ಸಲ್ಲಿಸಿದರು.
ಇದೇ ವೇಳೆ 2026ರ ಏಪ್ರಿಲ್ 18ರಂದು ಲಂಡನ್ನ ಬಸವೇಶ್ವರ ಪ್ರತಿಮೆಯ 10ನೇ ವಾರ್ಷಿಕೋತ್ಸವ ಆಯೋಜಿಸಲಾಗಿದೆ. ಇದರಲ್ಲಿ ಭಾಗಿಯಾಗುವಂತೆ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಪರವಾಗಿ ನೀರಜ್ ಪಾಟೀಲ್, ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಅಧಿಕೃತ ಆಹ್ವಾನ ಪತ್ರವನ್ನು ಸಚಿವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಬಸವ ತತ್ವದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿದೆ. ಕರ್ನಾಟಕದಲ್ಲಿ ಕ್ರಾಂತಿ ಮಾಡಿರುವ ನಮ್ಮ ಬಸವಣ್ಣನವರ ಪ್ರತಿಮೆ ಅನಾವರಣದ ದಶಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಲು ಮಾಡಿರುವ ಈ ಮನವಿಯನ್ನು ನೀಡುತ್ತೇನೆ. ಉಭಯ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಬಸವೇಶ್ವರರ ವಚನಗಳು ಇಂದಿನ ಕಾಲಘಟ್ಟದಲ್ಲಿಯೂ ಅತಿ ಪ್ರಸ್ತುತವಾಗಿದ್ದು, ನ್ಯಾಯಸಮ್ಮತ ಮತ್ತು ಸಮಾನತೆಯನ್ನು ಒಳಗೊಂಡ ಸಮಾಜವನ್ನು ನಿರ್ಮಿಸಲು ಮಾರ್ಗದರ್ಶಕವಾಗಿವೆ ಎಂದು ಸಚಿವರು ಹೇಳಿದರು.
ಬಸವೇಶ್ವರರ ಪ್ರತಿಮೆಯನ್ನು 2015ರ ನವೆಂಬರ್ 14ರಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಹಾಗೂ ಸ್ಥಳೀಯ ಕನ್ನಡಿಗರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa