ನೋಯ್ಡಾ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಂಬೈ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸರು ಶನಿವಾರ ಜಂಟಿ ಕಾರ್ಯಾಚರಣೆಯಲ್ಲಿ ನೋಯ್ಡಾದಿಂದ ಬಂಧಿಸಿದ್ದಾರೆ.
ಸೆಪ್ಟೆಂಬರ್ 04 ರಂದು ಮುಂಬೈ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬಾಂಬ್ ದಾಳಿ ಕುರಿತು ಸಂದೇಶ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಆರೋಪಿಯಾಗಿರುವ ಅಶ್ವಿನಿ ಕುಮಾರ್ ಸುಪ್ರಾ, ಬಿಹಾರ ಮೂಲದವನು. ಕಳೆದ ಐದು ವರ್ಷಗಳಿಂದ ನೋಯ್ಡಾದಲ್ಲಿ ವಾಸವಿದ್ದ ಈತ ತನ್ನನ್ನು ಜ್ಯೋತಿಷಿ ಎಂದು ಕರೆಸಿಕೊಂಡಿದ್ದ. ಆದರೆ, ಸೆಪ್ಟೆಂಬರ್ 04 ರಂದು ಕಳುಹಿಸಿದ ಸಂದೇಶದಲ್ಲಿ, ತಾನು ಪಾಕಿಸ್ತಾನದ ಲಷ್ಕರ್-ಎ-ಜಿಹಾದಿ ಸಂಘಟನೆಯ ಸದಸ್ಯನಾಗಿದ್ದಾಗಿ ಹೇಳಿಕೊಂಡು, ಅನಂತ ಚತುರ್ದಶಿಯಂದು 400 ಕೆ.ಜಿ. ಆರ್ಡಿಎಕ್ಸ್ ಬಳಸಿ ಮುಂಬೈನ ವಿವಿಧ ಭಾಗಗಳಲ್ಲಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ.
ಸಂದೇಶದಲ್ಲಿ 34 ವಾಹನಗಳಲ್ಲಿ 34 ಮಾನವ ಬಾಂಬ್ಗಳನ್ನು ಇರಿಸಲಾಗಿದ್ದು, 14 ಭಯೋತ್ಪಾದಕರು ಈಗಾಗಲೇ ಮುಂಬೈ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ನೀಡಲಾಗಿತ್ತು. ಇದರ ತೀವ್ರತೆಯನ್ನು ಗಮನಿಸಿದ ಪೊಲೀಸರು, ತಕ್ಷಣವೇ ಕಾರ್ಯಾಚರಣೆ ಆರಂಭಿಸಿ ಶನಿವಾರ ನೋಯ್ಡಾದಲ್ಲಿ ಅಶ್ವಿನಿಯನ್ನು ಬಂಧಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa