ಬೆಂಗಳೂರು, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೆ. ಸಿ ವ್ಯಾಲಿ 2 ನೇ ಹಂತದ ಯೋಜನೆಯಡಿ ಲಕ್ಷ್ಮೀ ಸಾಗರ ಪಂಪ್ ಹೌಸ್ ನಿಂದ ಕೋಲಾರ ಜಿಲ್ಲೆಯ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು, ಕೆಸಿ ವ್ಯಾಲಿ ಯೋಜನೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ವ್ಯರ್ಥವಾಗುತ್ತಿದ್ದ ನೀರನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಈ ಭಾಗದ ರೈತರ ಜೀವನದಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಬಯಲು ಸೀಮೆಯ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ದಿಯ ಮೂಲಕ ಸರ್ವತೋಮುಖ ಅಭಿವೃದ್ದಿಯ ಕನಸು ಇಂದು ನನಸಾಗಿದೆ ಎಂದರು.
ಈಗಾಗಲೇ ವೃಷಭಾವತಿ ವ್ಯಾಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಇನ್ನಷ್ಟು ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುವ ಕಾಮಗಾರಿ ಭರದಿಂದ ಸಾಗಿದೆ. ಪ್ರಸ್ತುತ ಈ ಯೋಜನೆಯಲ್ಲಿ 9 ಪಂಪಿಂಗ್ ಸ್ಟೇಶನ್ಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದರು.
ಕೆಸಿ ವ್ಯಾಲಿ ಎರಡನೇ ಹಂತದ ಯೋಜನೆಯ ಲಕ್ಷ್ಮಿಸಾಗರದ 5 ನೇ ಪಂಪ್ಹೌಸ್ ನಿಂದ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಇನ್ನುಳಿದ ಪಂಪ್ಹೌಸ್ಗಳನ್ನು ಪ್ರಸಕ್ತ ಸಾಲಿನ ಅಂತ್ಯದೊಳಗೆ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ಚಾಲನೆ ಮಾಡಲು ಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಲಕ್ಷ್ಮಿಸಾಗರದ ಮೊದಲನೇಯ ಪಂಪ್ಹೌಸ್ನ ಮೂಲಕ 5.28 ದ.ಲ.ಲೀ. ನೀರಿನಿಂದ ಕೋಲಾರ ತಾಲೂಕಿನ 11 ಕೆರೆಗಳನ್ನು, ಆರ್.ಪಿ.-1 ರಿಂದ 1.00 ದ.ಲ.ಲೀ. ನೀರಿನಿಂದ ಕೋಲಾರ ತಾಲ್ಲೂಕಿನ 4 ಕೆರೆಗಳನ್ನು ಹಾಗೂ ಆರ್.ಪಿ.-2 ಡೆಲಿವರಿ ಚೆಂಬರ್ನಿAದ 4.95 ದ.ಲ.ಲೀ. ನೀರಿನಿಂದ ಕೋಲಾರ ತಾಲ್ಲೂಕಿನ 15 ಕೆರೆಗಳನ್ನು ತುಂಬಿಸಲಾಗುತ್ತದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa