ಗದಗ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗ್ರಾಮೀಣ ಪ್ರದೇಶದಲ್ಲಿ ಜ್ಞಾನ ಸಂಪಾದನೆಗೆ ಅತ್ಯಂತ ಸರಳ ಮತ್ತು ಸುಲಭವಾದ ಮಾರ್ಗಗಳನ್ನು ಗ್ರಂಥಾಲಯ ಒದಗಿಸುತ್ತದೆ. ಯುವಕರು, ಗ್ರಾಮಸ್ಥರು ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು’’ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಕೆ. ಇನಾಮದಾರ ಹೇಳಿದರು.
ಗದಗ ತಾಲೂಕಿನ ಬೆನಕನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕದಾಳ ಗ್ರಾಮದಲ್ಲಿ ನೂತನ ಉಪ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯಲ್ಲಿ ಗ್ರಂಥಾಲಯ ತೆರೆದಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಪಠ್ಯದ ಜತೆ ಇತರೆ ಪುಸ್ತಕಗಳನ್ನು ಓದುವುದಕ್ಕೆ ಸಹಕಾರಿಯಾಗಿದೆ. ಜತೆಗೆ ದಿನಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಪುಸ್ತಕ ಓದುವ, ಓದಿದ್ದನ್ನು ಮನನ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.
ಗ್ರಂಥಾಲಯಗಳು ಸಾರ್ವಜನಿಕರ ಜ್ಞಾನ ದಾಹವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಓದುಗರಿಗೆ ಸಹಾಯವಾಗುವಂತೆ ಅನೇಕ ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಐಎಎಸ್, ಐಪಿಎಸ್ ಓದುವಂತವರಿಗೂ ಇಲ್ಲಿ ಪುಸ್ತಕಗಳನ್ನು ಒದಗಿಸುತ್ತೇವೆ. ಇನ್ನೂ ಪುಸ್ತಕಗಳ ಬೇಡಿಕೆ ಸಲ್ಲಿಸಿದರೆ ತರಿಸಿಕೊಡಲಾಗುವುದು ಎಂದರು.
ಪ್ರತಿ ಗ್ರಾಮದಲ್ಲಿ ಅಕ್ಷರಸ್ಥರಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಗ್ರಂಥಾಲಯಗಳ ಸ್ಥಾಪನೆ ಮಾಡಿವೆ. ಅದರ ಹೊರತಾಗಿಯೂ ಉಪ ಗ್ರಂಥಾಲಯ ಸ್ಥಾಪನೆ ಮಾಡಿ ಪ್ರತಿ ಹಳ್ಳಿಗಳಿಗೂ ಗ್ರಂಥಾಲಯ ಸ್ಥಾಪನೆ ಮುಂದಾಗಿದೆ. ಆ ನಿಟ್ಟಿನಲ್ಲಿ ಸಂಕದಾಳ ಗ್ರಾಮದಲ್ಲಿ ಇಂದು ಉದ್ಘಾಟನೆಯಾಗಿದೆ. ತಾಲೂಕಿನಲ್ಲಿ 26 ಗ್ರಂಥಾಲಯಗಳ ಸದ್ಯ ಸ್ಥಾಪನೆಯಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಈ ವೇಳೆ ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು ನೂತನ ಗ್ರಂಥಾಲಯಕ್ಕೆ ಜಾಗವಿದೆ ಸ್ವಂತ ಕಟ್ಟಡ ನಿರ್ಮಿಸಿಕೊಡಲು ಮನವಿ ಮಾಡಿದರು. ಪ್ರಸಕ್ತ ವರ್ಷದಲ್ಲಿ ತಾಲೂಕ ಪಂಚಾಯತ್ ಅನುದಾನದ ಕ್ರಿಯಾಯೋಜನೆ ಈಗಾಗಲೇ ಅನುಮೋಧನೆಯಾಗಿದೆ. ಮುಂದಿನ ವರ್ಷದ ಕ್ರಿಯಾಯೋಜನೆಯಲ್ಲಿ ಇಟ್ಟು ಕಟ್ಟಡ ನಿರ್ಮಾಣ ಮಾಡಉವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಶಾಂತವ್ವ ಕೊವಿ, ಉಪಾಧ್ಯಕ್ಷರಾದ ಪಾರ್ವತೆವ್ವ ಮಾದರ, ಸದಸ್ಯರಾದ ಸಿದ್ದಣ್ಣ ಅಂಗಡಿ, ನಾಗನಗೌಡ ಪೋಲಿಸ್ ಪಾಟೀಲ, ವೀರಪ್ಪ ನಾಯ್ಕರ್, ಮುಖಂಡರಾದ ಸಿ.ಕೆ. ರಾಚನಗೌಡ್ರ, ಬಸಪ್ಪ ಭೂಮಣ್ಣನವರ, ಸಿದ್ದನಗೌಡ ಚನ್ನಪ್ಪಗೌಡ್ರ, ಪಿಡಿಒ ಎಲ್.ಬಿ. ಕಲ್ಲಾಪೂರ, ಕಾರ್ಯದರ್ಶಿ, ಶರಣಪ್ಪ ಬಾರಕೇರ್, ಪಂಚಾಯತ್ ಸಿಬ್ಬಂದಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP