ಬಳ್ಳಾರಿ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಾಹ್ಯ ವಸ್ತುಗಳ ಮೇಲಿನ ಆಸಕ್ತಿಯಿಂದ ನಾವು ಅಂತರಂಗದ ಸುಖ ಮತ್ತು ಶಾಂತಿಯನ್ನು ಕಳೆದುಕೊಂಡಿದ್ದೇವೆ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಜಮಾತೆ ಇಸ್ಲಾಮಿ ಹಿಂದ್, ಬಳ್ಳಾರಿ ಜಿಲ್ಲಾ ಘಟಕ ಈದ್ ಮಿಲಾದ್ ಅಂಗವಾಗಿ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ `ಸೀರತ್ ಪ್ರವಚನ'ದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸತ್ಯ, ನ್ಯಾಯದ ಪ್ರತಿಪಾದನೆ ಪ್ರಾಮಾಣಿಕತೆಯನ್ನು ಪ್ರವಾದಿ ಮುಹಮ್ಮದ್ ಅವರು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು ಎಂದರು.
ಬಿಷಪ್ ಡಾ. ಹೆನ್ರಿ ಡಿ'ಸೋಜಾ ಅವರು ಅತಿಥಿಗಳಾಗಿ, ದಯೆ, ಕರುಣೆ ಮತ್ತು ಮಾನವೀಯತೆ ಎಲ್ಲಾ ಧರ್ಮಗಳ ಜೀವಾಳವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಳಕಲ್ಲಿನ ಲಾಲ್ಸಾಬ್ ಕಂದಗಲ್ ಅವರು, ಧರ್ಮಗಳನ್ನು ಸ್ವಾರ್ಥಕ್ಕಾಗಿ ಬಳಸಲು, ಸೌಹಾರ್ದತೆ ಸಹಬಾಳ್ವೆಯನ್ನು ಕದಡಲು ಬಳಸದೇ ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ : ಇಹ-ಪರಗಳಲ್ಲಿ ಸಲ್ಲುವಂತೆ ಬೋಧನೆ ಮಾಡಬೇಕು ಎಂದರು.
ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟೇಶ್ ದಳವಾಯಿ ಮತ್ತು ಕಸಾಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅವರು ಮುಖ್ಯ ಅತಿಥಿಗಳಾಗಿದ್ದರು.
ಬೌದ್ಧ ಧರ್ಮದ ಗುರುಗಳಾದ ಕಮಲರತ್ನ ಬಂತೇಜಿ, ಸಿಖ್ ಧರ್ಮದ ಮುಖಂಡರಾದ ಇಂದ್ರಜಿತ್ ಸಿಂಗ್, ದಲಿತ ಸಂಘರ್ಷ ಸಮಿತಿಯ ಜಿ. ಗೋವರ್ಧನ, ಜಮಾತೆ ಇಸ್ಲಾಮಿ ಹಿಂದ್ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಡಾ. ಸೈಯದ್ ಜೈನುಲಾಬೀದ್ದೀನ್ ಖಾದ್ರಿ, ನಗರ ಘಟಕದ ಅಧ್ಯಕ್ಷ ನಿಜಾಮುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜನಾಬ್ ಮುಹಮ್ಮದ್ ಖಲೀಲ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸೈಯದ್ ಮಿಸ್ಬಾಹುದ್ದೀನ್ ಖಾದ್ರಿ ಅವರು ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್