ಕುರುಗೋಡು, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಷಯವಾರು ವೈವಿಧ್ಯಮಯ ವಿಷಯಗಳ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆಡಳಿತ ವಿಭಾಗದ ಕುಲಸಚಿವ ಪಿ. ನಾಗರಾಜು ಅವರು ತಿಳಿಸಿದ್ದಾರೆ.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುರುಗೋಡು ಇವರ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ `ರಾಜ್ಯ ಶಿಕ್ಷಣ ನೀತಿ ಅನ್ವಯ 2025-26 ನೇ ಸಾಲಿನ ಶೈಕ್ಷಣಿಕ ಮೂರನೇ ಸೆಮಿಸ್ಟರ್ನ ಪದವಿ ಕನ್ನಡ ಭಾಷಾ ಪಠ್ಯಪುಸ್ತಕಗಳ ಲೋಕಾರ್ಪಣೆ ಹಾಗೂ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳಾಗಿದ್ದು, ಸಾಹಿತ್ಯದ ಅಭಿರುಚಿಯನ್ನು ಮೂಡಿಸುವಲ್ಲಿ, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ ಎಂದು ತಿಳಿಸಿದರು.
ಸಾಹಿತಿ ಹಾಗೂ ಸಿಂಡಿಕೇಟ್ ಸದಸ್ಯ ಡಾ.ಅಮರೇಶ್ ನುಗಡೋಣಿ ಅವರು ಸ್ನಾತಕ ಪದವಿಯ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಿ, ಕನ್ನಡ ಸಾಹಿತ್ಯದ ಚರಿತ್ರೆಯ ಅರಿವು ಮತ್ತು ಕನ್ನಡ ಭಾಷಾ ಜ್ಞಾನ ನೀಡುವ ಕಾರ್ಯವನ್ನು ಪಠ್ಯಪುಸ್ತಕಗಳು ಮಾಡುತ್ತವೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೇ ಸ್ಪರ್ಧಾತ್ಮಕ ಪ್ರಪಂಚಕ್ಕೆ ಉಪಯುಕ್ತವಾಗುವ ಜ್ಞಾನವನ್ನು ಸಂಪಾದಿಸಬೇಕು ಎಂದರು.
ಕಲಾ ವಿಭಾಗದ ಡೀನ್ ಮತ್ತು ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ. ರಾಬರ್ಟ್ ಜೋಸ್ ಅವರು, ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಸಾಹಿತ್ಯ ಲೋಕಕ್ಕೆ ಮಾರ್ಗವಾಗಿದ್ದು, ಇಂದಿನ ಡಿಜಿಟಲ್ ಯುಗದಲ್ಲಿ ಉತ್ತಮ ಪಠ್ಯಪುಸ್ತಕಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸಬೇಕಾದ ಅಗತ್ಯವಿದೆ ಎಂದರು.
ಪ್ರಸಾರಾಂಗದ ನಿರ್ದೇಶಕ ಡಾ.ತಿಪ್ಪೇರುದ್ರ ಪ್ರಾಸ್ತವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲೆ ಡಾ. ಶಾಂತಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಡಾ. ಶಶಿಕಾಂತ್ ಅವರು ಸ್ವಾಗತಿಸಿದರು, ಮಂಜುನಾಥಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಪ್ರಸಾರಾಂಗದ ಹಿಂದಿನ ನಿರ್ದೇಶಕ ಡಾ.ಅರುಣಕುಮಾರ ಲಗಶೆಟ್ಟಿ, ವಾಣಿಜ್ಯ ಸೌರಭ-2 ಪಠ್ಯಪುಸ್ತಕದ ಸಂಪಾದಕ ಸಿ.ದೇವಣ್ಣ, ರಘುಪ್ರಸಾದ್, ಮೌನೇಶ್ ಬಡಿಗೇರ್, ಕಾಲೇಜಿನ ಅಧ್ಯಾಪಕ ಡಾ.ಚನ್ನಬಸವಯ್ಯ ಹೆಚ್.ಎಂ., ಮುರಳಿಶಂಕರಗೌಡ, ಡಾ.ಜ್ಞಾನ ಪ್ರಸೂನಾಂಭ, ಮಧುಸೂಧನ್, ವೀರಲಿಂಗಪ್ಪ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್