ಗದಗ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಜಾತಿ ಸಮೀಕ್ಷೆಯ ಬಗ್ಗೆ ಈಗಲೇ ಪರ ವಿರೋಧ ಅಭಿಪ್ರಾಯಗಳು ಬರುತ್ತಿರುವದನ್ನ ಗಮನಿಸಿದರೆ ವಿವಿಧ ಸಮಾಜಗಳ ವಿಭಜನೆಯ ಒಳಸಂಚು ಇದರಲ್ಲಿ ಅಡಗಿರುವದು ಸ್ಪಷ್ಟವಾಗುತ್ತದೆ ಇದು ನಾಡಿಗೆ ಕಾಂಗ್ರೆಸ್ ತಂದಿರುವ ಅಪಾಯ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ವಂಚಿತರಾದ ಕಾಂಗ್ರೆಸಿಗರು ಸಂವಿಧಾನಿಕ ಸಂಸ್ಥೆಗಳ ವಿಶ್ವಾಸರ್ಹತೆ ಕುಂದಿಸುವ, ಸಂವಿಧಾನ ರಕ್ಷಣೆ ಹಾಗು ಮತ ಕಳ್ಳತನ ಹೆಸರಲ್ಲಿ ಆರಾಜಕತೆ ಸೃಷ್ಟಿಗೆ ಪ್ರಯತ್ನಿಸಿ ಕೈಸುಟ್ಟುಕೊಂಡು ಈಗ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯ ಹೆಸರಲ್ಲಿ ಹಲವಾರು ಅಂಶಗಳ ಪಟ್ಟಿಯೊಂದಿಗೆ ಜಾತಿಗಳ ವರ್ಗೀಕರಣ, ಹೊಸಹೊಸ ಜಾತಿಗಳ ಸೃಷ್ಟಿ ಮಾಡುವ ಮೂಲಕ ಧರ್ಮ, ಜಾತಿ, ಮೀಸಲಾತಿಯ ಹೆಸರಲ್ಲಿ ವಿವಿಧ ಸಮುದಾಯಗಳ ಮಧ್ಯ ಪರಸ್ಪರ ಕಲಹ ಕಂದಕ ಸೃಷ್ಟಿಸಿ ಮತ ವಿಭಜನೆ ಮಾಡುವ ಗೌಪ್ಯ ಕಾರ್ಯಸೂಚಿಯ ಅನುಷ್ಟಾನಕ್ಕೆ ಈ ಸಮೀಕ್ಷೆಯನ್ನ ಕೈಗೊಳ್ಳುತ್ತಿದೆ ಎಂಬ ಅನುಮಾನ ಮೂಡುತ್ತಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಲ್ಲು ಈ ಬಗ್ಗೆ ಒಮ್ಮತವಿಲ್ಲ, ರಾಜ್ಯ ಸಚಿವ ಸಂಪುಟ ಸದಸ್ಯರಲ್ಲೂ ಭಿನ್ನಾಭಿಪ್ರಾಯ ಇದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಕ್ಕೆ ಬಿದ್ದವರಂತೆ ಸಮೀಕ್ಷೆ ಕೈಗೊಳ್ಳಲು ಮುಂದಾಗಿರುವದು ದುರದೃಷ್ಟಕರ. ಸಮೀಕ್ಷೆ ವಿರೋಧಿಸಿದ ಮಂತ್ರಿಗಳಿಗೆ ಸಹಿಮಾಡಿದ ಪತ್ರ ಕೊಡಿ ಅದನ್ನ ರಾಹುಲ್ ಗಾಂಧಿಗೆ ಕೊಡುತ್ತೇನೆ ಅಂತ ಬೆದರಿಕೆ ಹಾಕಿ ಅವರ ಬಾಯನ್ನು ಮುಚ್ಚಿಸಿದ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಕೆಲಸ ಮಾಡುತ್ತಿರುವದು ಸ್ಪಷ್ಟವಾಗುತ್ತದೆ. ಪ್ರಜಾಪ್ರಭುತ್ವ ಮಾದರಿಯಿಂದ ಮತ್ತೆ ರಾಜಪ್ರಭುತ್ವಕ್ಕೆ ದೇಶವನ್ನು ದೂಡುವ ಕಾಂಗ್ರೆಸನ ಈ ಪ್ರಯತ್ನ ದೇಶದ ಜನತೆಗೆ ಮಾಡಿದ ಅಪಮಾನ.
ಈ ಹಿಂದೆ ಕಾಂತರಾಜ ವರದಿ ಬಗ್ಗೆ ವಿರೋಧ ಪಕ್ಷಗಳ, ವಿವಿಧ ಸಮಾಜದ ಗಣ್ಯರ, ಮಠಾಧಿಪತಿಗಳ ವಿರೋಧವನ್ನ ಗಣನೆಗೆ ತಗೆದುಕೊಳ್ಳದೆ ಅನುಷ್ಟಾನಕ್ಕೆ ಮುಂದಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಆಕ್ಷೇಪಿಸಿದ ಕೂಡಲೇ ಅದನ್ನು ಕೈಬಿಟ್ಟು ಈಗ ಅಗತ್ಯ ಪೂರ್ವ ತಯಾರಿ ಇಲ್ಲದೆಯೇ ಅಲ್ಪ ಅವಧಿಯಲ್ಲಿ ಸಮೀಕ್ಷೆ ಕೈಗೊಳ್ಳಲು ಮುಂದಾಗಿರುವದು ಇದು ಇನ್ನೊಂದು ಕಾಂತರಾಜ ವರದಿಯ ಪ್ರತಿರೂಪ ಆಗಲಿದೆಯೇ ವಿನಹ ರಾಜ್ಯದ ಜನತೆಯ ಹಿತ ಕಾಪಾಡುವ ಸಮೀಕ್ಷೆ ಆಗಲಾರದು.
ಸಮಾಜದ ಅಸಮಾನತೆ,ವಿಭಜನೆಗೆ ಕಾರಣವಾಗಲಿರುವ ಹಾಗು ಸಾಮಾಜಿಕ ಸೌಹಾರ್ದತೆಗೆ ಹಾನಿ ಉಂಟುಮಾಡುವ ಈ ಸಮೀಕ್ಷೆಯನ್ನು ಕೈಬಿಟ್ಟು ಜನಹಿತಕ್ಕಾಗಿ ಸಕರಾತ್ಮಕ ಕಾರ್ಯಕ್ರಮಗಳತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಲಿಂಗರಾಜ ಪಾಟೀಲ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP