ಬೆಂಗಳೂರು, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಡ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮಹಿಳೆ ಪಾರಾಗಿದ್ದಾಳೆ.
ಮೃತರನ್ನು ಶಿವು (32), ಮಗಳು ಚಂದ್ರಕಳಾ (11) ಮತ್ತು ಮಗ ಉದಯ್ಸೂರ್ಯ (07) ಎಂದು ಗುರುತಿಸಲಾಗಿದೆ.
ಪತಿ ಶಿವು ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಚಿಕಿತ್ಸೆಗಾಗಿ ಕುಟುಂಬವು ದೊಡ್ಡ ಮಟ್ಟದ ಸಾಲ ಮಾಡಿಕೊಂಡಿತ್ತು. ಸಾಲದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ದಂಪತಿ ಆತ್ಮಹತ್ಯೆ ತೀರ್ಮಾನಿಸಿದರೆಂದು ತಿಳಿದು ಬಂದಿದೆ.
ಮಕ್ಕಳು ತಬ್ಬಲಿಗಳಾಗಬಾರದು ಎಂಬ ಕಾರಣಕ್ಕೆ ಮೊದಲಿಗೆ ಗಂಡ ಮತ್ತು ಇಬ್ಬರು ಮಕ್ಕಳನ್ನು ತಾಯಿ ಕುತ್ತಿಗೆಗೆ ವೇಲ್ ಬಿಗಿದು ಸಾಯಿಸಿ ಬಳಿಕ ತಾನೂ ಹಗ್ಗ ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಈ ವೇಳೆ ಹಗ್ಗ ತುಂಡಾದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮಹಿಳೆಯನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa